ನ್ಯೂಸ್ ನಾಟೌಟ್: ಕಳ್ಳರನ್ನು ಹಿಡಿದುಕೊಡಿ ಎಂದು ಜನ ಪೊಲೀಸ್ ಠಾಣೆ ಮೆಟ್ಟಿಲೇರುವುದನ್ನು ನೋಡಿದ್ದೇನೆ. ಆದರೆ ಈ ಊರಿನ ಜನ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲವೆಂದು ತಾವೇ ತಮ್ಮ ಊರಿನ ರಕ್ಷಣೆಗೆ ನಿಂತ ಅಪರೂಪದ ಘಟನೆ ಹಾವೇರಿ ಜಿಲ್ಲೆಯ ಮಾರನಬೀಡ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದಲ್ಲಿ ಮನೆ ಕಳ್ಳತನದ ಹಾವಳಿ ತೀವ್ರಗೊಂಡಿದೆ. ಕಳೆದ ಎರಡು ವಾರಗಳಿಂದ ಸರಣಿ ಕಳ್ಳತನಗಳು ವರದಿಯಾಗಿದ್ದವು. ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದತ್ತು. ಇದರ ಪರಿಣಾಮವಾಗಿ, ಹಗಲಿನಲ್ಲಿ ಹೊಲಗಳಲ್ಲಿ ದುಡಿದು ಬಳಲಿದರೂ, ರಾತ್ರಿಯಿಡೀ ನಿದ್ದೆಗೆಟ್ಟು ತಮ್ಮ ಮನೆಗಳ ರಕ್ಷಣೆಗೆ ನಿಂತಿದ್ದಾರೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ, ಗ್ರಾಮಸ್ಥರು ದೊಣ್ಣೆ ಮತ್ತು ಕೋಲುಗಳನ್ನು ಹಿಡಿದು ಗ್ರಾಮದಾದ್ಯಂತ ಗಸ್ತು ತಿರುಗುತ್ತಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ನೆರವು ಸಿಗದ ಕಾರಣ, ತಮ್ಮ ಆಸ್ತಿಪಾಸ್ತಿಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ತಾವೇ ಗಸ್ತು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಹಾವೇರಿ ನಗರ, ನರೇಗಲ್ಲ ಮತ್ತು ತವರಮರಳಿಹಳ್ಳಿಗಳಲ್ಲೂ ಇದೇ ರೀತಿ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತು ಭದ್ರತೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.













