ರತನ್ ಟಾಟಾ ಆಸೆಯಂತೆ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜನೆಗೆ ತಯಾರಿ, ಹಡಗಿನಲ್ಲಿ ಮೆರವಣಿಗೆ..!

ನ್ಯೂಸ್ ನಾಟೌಟ್: ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ. ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ಅ.9 ರಂದು ಕೊನೆಯುಸಿರೆಳೆದರು. ಅ.10 ರಂದು ಅಂತಿಮ ವಿಧಿವಿಧಾನಗಳನ್ನು ಮುಂಬೈನ (Mumbai) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು. ಇದೀಗ ಅವರ ಆಸೆಯಂತೆ ಅವರ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸುವುದಾಗಿ ಟಾಟಾ ಕುಟುಂಬ ನಿರ್ಧಾರ ಕೈಗೊಂಡಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಹಡಗಿನಲ್ಲಿ ಮೆರವಣಿಗೆಯ ಮೂಲಕ ಚಿತಾ ಭಸ್ಮವನ್ನು ವಿಸರ್ಜಿಸಲಾಗುವುದು. ಈ ಸಂದರ್ಭದಲ್ಲಿ ಅವರ ಕುಟುಂಬ, ಅವರ ಸ್ನೇಹಿತರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರತನ್ ಟಾಟಾ ಮುಂಬೈ ನಗರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಜೊತೆಗೆ ತಮ್ಮ ಜೀವನದ ಬಹುಪಾಲು ದಿನಗಳನ್ನು ಅವರು ಅಲ್ಲಿಯೇ ಕಳೆದಿದ್ದು, ಟಾಟಾ ಗ್ರೂಪ್ಸ್ ಎಂಬ ವ್ಯವಹಾರ ಸಾಮ್ರಾಜ್ಯಕ್ಕೆ ಮುಂಬೈನಲ್ಲಿ ಅಡಿಪಾಯ ಹಾಕಿದ್ದರು.