ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ, ಗಂಡ ಕೊಲೆಯಾದಾಗ 5 ತಿಂಗಳ ಗರ್ಭಿಣಿಯಾಗಿದ್ದ ಸಹನಾ

ನ್ಯೂಸ್ ನಾಟೌಟ್: ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿಯ ಪತ್ನಿ ಸಹನಾ ಬುಧವಾರ (ಅ.16) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ಘಟನೆ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದ ಸಹನಾ, ಗಂಡನ ಸಾವಿನಿಂದ ಭಾರಿ ಆತಂಕಕ್ಕೀಡಾಗಿದ್ದರು. ಓರ್ವ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರೇಣುಕಾಸ್ವಾಮಿ ಪೋಷಕರಿಗೆ ಮೊಮ್ಮಗನ ಆಗಮನದಿಂದ ಸ್ವಲ್ಪ ಸಮಾಧಾನ ತಂದಿದೆ.ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಈ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಬೆಳಿಗ್ಗೆ 6.55 ಕ್ಕೆ ಗಂಡು ಮಗುವಿಗೆ ಸಹನ‌ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಮ್ಮ ಸೊಸೆ ಗಂಡು ಮಗುವಿಗೆ ಜನ್ಮ ನೀಡಿರೋದು ಮಗನೇ ಮರಳಿ ಬಂದಷ್ಟು ಸಂತಸವಾಗಿದೆ ಎಂದು ಭಾವುಕರಾಗಿದ್ದಾರೆ.