ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಕ್ರೀಡಾಕೂಟ ಆಯೋಜಿಸಿ ವಂಚನೆ..! ಲಕ್ಷಾಂತರ ರೂಪಾಯಿ ಬಹುಮಾನ ಘೋಷಿಸಿ ಮೋಸ..!

ನ್ಯೂಸ್ ನಾಟೌಟ್ : ದಿ.ನಟ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿ ಹಣ ವಂಚಿಸಿರುವ ಆರೋಪ ಕೇಳಿಬಂದಿದೆ. ಮಂಡ್ಯದ ಮಳವಳ್ಳಿ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ವಂಚನೆ ಮಾಡಿರುವುದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮೋಸ ಮಾಡಿದ್ದಾನೆ ಎನ್ನಲಾಗಿದ್ದು, ಆತನ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಮಳವಳ್ಳಿಯ ಡಾ.ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಓಟದ ಸ್ಪರ್ಧೆ ಏರ್ಪಡಿಸಿಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಪೋಸ್ಟರ್ ವೈರಲಾಗಿತ್ತು. ಪೋಸ್ಟರ್‌ನಲ್ಲಿ ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ 4 ಲಕ್ಷ ರೂ., ತೃತೀಯ 3 ರೂ., ನಾಲ್ಕನೇ ಬಹುಮಾನ 2 ಲಕ್ಷ ರೂ. ಹಾಗೂ ಐದನೇ ಬಹುಮಾನ 1 ಲಕ್ಷ ರೂ. ಎಂದು ನಮೂದಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 10 ಸಾವಿರ ರೂ. ಪ್ರವೇಶ ಶುಲ್ಕ, ಮುಂಗಡ 3500 ರೂ. ನೀಡಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿತ್ತು. ನ.20 ರಂದು ಬೆಳಗ್ಗೆ 8 ಗಂಟೆಗೆ ಮಳವಳ್ಳಿಯಲ್ಲಿ ಸ್ಪರ್ಧೆ ನಡೆಯುವುದಾಗಿ ಉಲ್ಲೇಖಿಸಲಾಗಿತ್ತು. ಪೋಸ್ಟರ್‌ ನಲ್ಲಿ ನಂಬರ್ ಹಾಕಿ ವಂಚಿಸಿದ್ದು, ಈಗಾಗಲೇ ಹಲವರಿಂದ ಹಣ ವಸೂಲಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಪ್ಪು ಹೆಸರಲ್ಲಿ ಕೋಟ್ಯಂತರ ಜನರಿಗೆ ಅಪರಿಚಿತ ವ್ಯಕ್ತಿ ಮೋಸ ಮಾಡುತ್ತಿದ್ದಾನೆ. ಡಾ.ರಾಜ್ ಕುಟುಂಬಕ್ಕೆ ಹಾಗೂ ಮಳವಳ್ಳಿಗೂ ಅವಿನಾಭಾವ ಸಂಬಂಧವಿದ್ದು, ಸ್ಪರ್ಧಾಳುಗಳಿಗೆ ಹಣದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದಾನೆ ಎನ್ನಲಾಗಿದೆ. ಅಪರಿಚಿತ ವ್ಯಕ್ತಿ ವಿರುದ್ಧ ರಾಶಿರಾಪು ಸೇನಾ ಸಮಿತಿಯಿಂದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Click