ದರ್ಶನ್ ಜಾಮೀನು ಅರ್ಜಿ ನಿರಾಕರಣೆಯ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ..! ಹೈಕೋರ್ಟ್ ತೀರ್ಪಿನ ಸಾಧ್ಯತೆಗಳೇನು..?

ನ್ಯೂಸ್ ನಾಟೌಟ್ : ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದು, ಆರೋಪಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಲು ಈಗ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಯಾಕೆ ಜಾಮೀನು ಕೊಡಬಾರದು ಎಂದು ಕೋರ್ಟ್ ಸೂಕ್ತ ಕಾರಣ ನೀಡಿ ಜಾಮೀನು ನೀಡಲು ನಿರಾಕರಿಸಿತ್ತು. ಈಗ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಮುಂದೇನು ಸಾಧ್ಯತೆಗಳಿವೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ. ಮೊದಲಿಗೆ ಜಾಮೀನು ಅರ್ಜಿ ನಿರಾಕರಣೆಯ ಆದೇಶದ ಪ್ರತಿಯನ್ನು ವಕೀಲರು ಪಡೆದುಕೊಳ್ಳಲಿದ್ದಾರೆ. ಯಾವ ಗ್ರೌಂಡ್ಸ್ ಮೇಲೆ ಜಾಮೀನು ನಿರಾಕರಣೆ ಮಾಡಿದ್ದಾರೆ ಎಂದು ವಿಶ್ಲೇಷಣೆ ನಡೆಸಲಾಗುತ್ತದೆ. ಆ ಬಳಿಕ ದರ್ಶನ್ ಹಾಗೂ ಕುಟುಂಬಸ್ಥರ ಜೊತೆ ಮುಂದಿನ ಸಾಧಕ-ಬಾಧಕಗಳ ಚರ್ಚಿಸಬೇಕು. ಹೈಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ವಕಾಲತ್ತಿಗೆ ಸಹಿ ಪಡೆಯಬೇಕು. ಆ ಬಳಿಕ ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಸೂಕ್ತ ದಾಖಲೆ ಮತ್ತು ಕಾರಣಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಮಧ್ಯೆ ಜಾಮೀನು ಅರ್ಜಿ ನಿಗದಿ ದಿನಾಂಕದಂದು ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಕಾಲಾವಕಾಶ ಕೇಳಬಹುದು. ಮೂರ್ನಾಲ್ಕು ದಿನಗಳ ಕಾಲ ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರಿ ವಕೀಲರಿಗೆ ಸಮಯಾವಕಾಶ ಸಿಗಬಹುದು. ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ನಲ್ಲಿ ಜಾಮೀನಿಗೆ ವಾದ ಮಂಡನೆಯಾಗಲಿದೆ. ಬಳಿಕ ಹೈಕೋರ್ಟ್ ತೀರ್ಮಾನ ಮಾಡಲಿದೆ. Click