ರಾತ್ರಿ ದಂಪತಿ ಮಧ್ಯೆ ಜಗಳ..! 3 ಮಕ್ಕಳಿಗೆ ತಂಪು ಪಾನೀಯಕ್ಕೆ ಕ್ರಿಮಿನಾಶಕ ಸೇರಿಸಿ ಕುಡಿಸಿದ ತಾಯಿ..! ಮುಂದೇನಾಯ್ತು..?

ನ್ಯೂಸ್ ನಾಟೌಟ್: ಕ್ಷುಲ್ಲಕ ವಿಷಯಕ್ಕೆ ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯ ಚಿಂಚೋಳಿ ತಾಲೂಕಿನ ಜಂಗ್ಲಿ ಪೀರ್ ತಾಂಡಾದಲ್ಲಿ ಸೋಮವಾರ(ಅ.21) ನಡೆದಿರುವುದಾಗಿ ವರದಿಯಾಗಿದೆ. ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೀತಾಬಾಯಿ ಸಂತೋಷ ರಾಠೋಡ್ (30) ಎಂಬವರು ಈ ಕೃತ್ಯ ಎಸಗಿದ ಮಹಿಳೆ ಎಂದು ಗುರುತಿಸಲಾಗಿದೆ. ಮಕ್ಕಳಾದ ಚೈತನ್ಯ (4) ಧನುಷ್ (3) ಮತ್ತು ಲಕ್ಷ್ಮೀ (ಒಂದೂವರೆ ತಿಂಗಳ ಮಗು)ಗೆ ವಿಷ ಕುಡಿಸಿದ ಗೀತಾಬಾಯಿ ಸಹ ವಿಷ ಸೇವನೆ ಮಾಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಹೊಡೆಯುವುದನ್ನು ಪತಿ ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿ ರವಿವಾರ ರಾತ್ರಿ ದಂಪತಿ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಗೀತಾಬಾಯಿ ತನ್ನ ಮೂರೂ ಮಕ್ಕಳಿಗೆ ಕ್ರಿಮಿನಾಶಕವನ್ನು ತಂಪು ಪಾನೀಯಕ್ಕೆ ಬೆರೆಸಿ ಮಕ್ಕಳಿಗೆ ಕುಡಿಸಿ ಬಳಿಕ ತಾನು ಕುಡಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಟ್ಟೆ ನೋವಿನಿಂದ ಚೀರಾಡುತ್ತಿದ್ದ ಮಕ್ಕಳು ಹಾಗೂ ತಾಯಿಯನ್ನು ತಾಂಡಾದ ಅಕ್ಕ ಪಕ್ಕದ ನಿವಾಸಿಗಳು ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಅಸ್ವಸ್ಥರಾಗಿರುವ ತಾಯಿ ಮತ್ತು ಮೂರು ಮಕ್ಕಳನ್ನು ಬೀದರ್ ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿಂಚೋಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ. Click