ನಟ ದರ್ಶನ್ ಜಾಮೀನಿಗೆ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲು..! ಬಿಡುಗಡೆಯಾದ್ರೂ ದಾಸ ಮತ್ತೆ ಜೈಲು ಸೇರುವ ಸಾಧ್ಯತೆ..!

ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಸದ್ಯದಲ್ಲೇ ಜಾಮೀನು ಸಿಗುವ ಭರವಸೆಯಲ್ಲಿದ್ದಾರೆ. ಕೆಳ ಹಂತದ ಕೋರ್ಟ್ ನಲ್ಲಿ ಅವರಿಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ದರ್ಶನ್ ನ ಮತ್ತೊಂದು ಪ್ರಕರಣದ ತನಿಖೆ ಆರಂಭವಾಗಿದೆ. ಅತ್ತ ಹೈಕೋರ್ಟ್ ಕೂಡ ಅವರ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಿದೆ. ಇನ್ನೇನು ಅಲ್ಲಿ ವಿಚಾರಣೆ ಶುರುವಾಗುತ್ತೆ ಎಂಬ ಹೊತ್ತಿನಲ್ಲೇ ದರ್ಶನ್ ವಿರುದ್ಧ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರಿಗೆ ಮತ್ತೊಂದು ಕಾನೂನು ತೊಡಕು ಉಂಟಾಗಿದೆ. ಕನ್ನಡ ಚಿತ್ರರಂಗದ ನಿರ್ಮಾಪಕ ಭರತ್ ಅವರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಅವರ ವ್ಯವಸ್ಥಾಪಕರ ವಿರುದ್ಧ ಅ. 1ರಂದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಅ. 18ರಂದು ದರ್ಶನ್ ಹಾಗೂ ಅವರ ವ್ಯವಸ್ಥಾಪಕರ ವಿರುದ್ಧ ಎನ್ ಸಿಆರ್ (ನಾನ್ – ಕಾಗ್ನಿಝೆಬಲ್ ರಿಪೋರ್ಟ್) ದಾಖಲಿಸಿದ್ದಾರೆ. 2022ರಲ್ಲಿ ಭಗವಾನ್ ಶ್ರೀ ಕೃಷ್ಣ ಎಂಬ ಚಿತ್ರವನ್ನು ನಿರ್ಮಾಪಕ ಭರತ್ ನಿರ್ಮಿಸಿದ್ದರು. ಚಿತ್ರದ ನಾಯಕ ಧ್ರುವನ್ ಹಾಗೂ ನಿರ್ಮಾಪಕರ ನಡುವೆ ಅಸಮಾಧಾನ ಏರ್ಪಟ್ಟಿತ್ತು. ಆಗ, ಧ್ರುವನ್ ಅವರು ಆ ವಿಚಾರವನ್ನು ನಟ ದರ್ಶನ್ ಮುಂದಿಟ್ಟಿದ್ದರು. ಆಗ ಮಧ್ಯಪ್ರವೇಶಿಸಿದ ನಟ ದರ್ಶನ್, ಫೋನ್ ಮೂಲಕ ನಿರ್ಮಾಪಕ ಭರತ್ ಅವರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು. Click