ಮಾಜಿ ಬಿಗ್‌ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ..! ಹೊಡೆದಾಡಿಕೊಂಡ ಜೋಡಿ, ಪೊಲೀಸರ ಮಧ್ಯ ಪ್ರವೇಶ..!

ನ್ಯೂಸ್‌ ನಾಟೌಟ್‌: ಒಂದು ಕಡೆ ಬಿಗ್ ಬಾಸ್ ಹನ್ನೊಂದರ ಸೀಸನ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದರೆ, ಮತ್ತೊಂದು ಕಡೆ ಮಾಜಿ ಬಿಗ್ ಬಾಸ್ ದಾಂಪತ್ಯದಲ್ಲಿ ಕಲಹ ಉಂಟಾಗಿದೆ. ಈ ಜೋಡಿ ಹೊಡೆದಾಡಿಕೊಂಡು ಠಾಣೆ ಮೆಟ್ಟಿಲೇರಿದ ಪ್ರಸಂಗವೂ ನಡೆದಿದೆ. ಬಿಗ್‌ಬಾಸ್ ಮತ್ತು ಕನ್ನಡದ ಕೋಟ್ಯಾಧಿಪತಿ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ ಬಾಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಗುವಿಗೆ ಬೈದಿದ್ದಕ್ಕೆ ಗಂಡ, ಅತ್ತೆ, ಮಾವ ಸೇರಿ ಥಳಿಸಿದ್ದಾರೆ ಎಂದು ಸಮೀರ್ ಆಚಾರ್ಯ ಪತ್ನಿ ಹುಬ್ಬಳ್ಳಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ. ಹುಬ್ಬಳ್ಳಿ ವಿಶ್ವೇಶ್ವರ ನಗರದಲ್ಲಿ ಘಟನೆ ನಡೆದಿದೆ. ಮಗಳು ಅಳುತ್ತಿದ್ದ ಕಾರಣಕ್ಕೆ ಸಮೀರ್ ಪತ್ನಿ ಶ್ರಾವಣಿ ಗದಸಿದ್ದಾರೆ. ಅಷ್ಟಕ್ಕೇ ಸಮೀರ್ ತಂದೆ ಆಕೆಯನ್ನ ಬೈದಿದ್ದಾರೆ. ಇದೇ ವಿಷಯ ದೊಡ್ಡದಾಗಿ ಬೆಳೆದು, ಪತಿ ಸಮೀರ್ ತಮ್ಮ ತಂದೆ ತಾಯಿ ಜೊತೆ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಶ್ರಾವಣಿ ಆರೋಪಿಸಿದ್ದಾರೆ. ಅಲ್ಲದೇ ಘಟನೆ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದಕ್ಕೆ ತನ್ನ ಮೊಬೈಲ್ ಒಡೆದು ಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇನ್ನೊಂದೆಡೆ ಸಮೀರ್ ಆಚಾರ್ಯ ತಂದೆಯ ತಲೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಶ್ರಾವಣಿ ಠಾಣೆ ಮೆಟ್ಟಿಲೇರಿದ್ದರು. ಇತ್ತ ಸಮೀರ್ ಆಚಾರ್ಯ ತಂದೆಯೂ ಸೊಸೆ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಸಮೀರ್ ತಂದೆ ರಾಘವೇಂದ್ರ ಮಣ್ಣೂರ ಅವರಿಗೂ ತಲೆಗೆ ಪೆಟ್ಟಾಗಿತ್ತು. ಬಳಿಕ ಠಾಣೆಯಲ್ಲಿ ಕೌನ್ಸಲಿಂಗ್ ಮಾಡಿದ ಪೊಲೀಸರು ದಂಪತಿ, ಅತ್ತೆ-ಮಾವರನ್ನ ಒಂದು ಮಾಡಿದ ಮನೆಗೆ ಕಳಿಸಿದ್ದಾರೆ. ಕೌನ್ಸೆಲಿಂಗ್ ಬಳಿಕ ಇನ್ಮುಂದೆ ಹೀಗೆ ಆಗುವುದಿಲ್ಲ ಎಂದು ಹೇಳಿ ಯಾವುದೇ ದೂರು ದಾಖಲಿಸದೇ ಬಂದಿದ್ದಾರೆ ಎನ್ನಲಾಗಿದೆ.