ಹಂದಿಗಳ ಜತೆ ಗುದ್ದಾಡಬೇಡಿ ನೀವೂ ಕೊಳಕಾಗುತ್ತೀರಿ ಎಂದು ಎಚ್‌.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಎಡಿಜಿಪಿ..! ಎಸ್‌.ಐ.ಟಿ ಮುಖ್ಯಸ್ಥ ಸದಸ್ಯರಿಗೆ ಬರೆದ ಪತ್ರದಲ್ಲೇನಿದೆ..?

ನ್ಯೂಸ್‌ ನಾಟೌಟ್‌: ”ಹಂದಿಗಳ ಜತೆ ಗುದ್ದಾಡಬೇಡಿ. ಏಕೆಂದರೆ ಹಂದಿಗಳಂತೆ ನೀವೂ ಕೊಳಕಾಗುತ್ತೀರಿ. ಹಂದಿಗಳು ಅದನ್ನು ಸಂಭ್ರಮಿಸುತ್ತವೆ ” ಎಂಬ ಜಾರ್ಜ್‌ ಬರ್ನಾಡ್‌ ಶಾ ಅವರ ಜನಪ್ರಿಯ ನುಡಿಗಟ್ಟು ಉಲ್ಲೇಖಿಸಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಗಳಿಗೆ ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥರಾಗಿರುವ ಎಡಿಜಿಪಿ ಎಂ.ಚಂದ್ರಶೇಖರ್‌ ರಾವ್‌ ತಿರುಗೇಟು ನೀಡಿದ್ದಾರೆ. ಎಸ್‌ಐಟಿ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಸಚಿವ ಎಚ್‌.ಡಿ ಕುಮಾರಸ್ವಾಮಿ ಆರೋಪದ ಬೆನ್ನಲ್ಲೇ ಎಸ್‌ಐಟಿ ಮುಖ್ಯಸ್ಥ ಚಂದ್ರಶೇಖರ್‌, ತನಿಖಾ ತಂಡಕ್ಕೆ ಧೈರ್ಯ ತುಂಬಿ ಪತ್ರ ಬರೆದಿದ್ದಾರೆ. ” ಪ್ರಕರಣದ ಆರೋಪಿ ಕುಮಾರಸ್ವಾಮಿ ಸುಳ್ಳು ಆರೋಪಗಳಿಂದ ನಮ್ಮನ್ನು ಕುಗ್ಗಿಸುವ, ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ. ಆರೋಪಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಆರೋಪಿಯೇ. ಇಂಥಹ ಬೆದರಿಕೆಗಳಿಗೆ ಎದೆಗುಂದಬಾರದು ” ಎಂದು ಹೇಳಿದ್ದಾರೆ. ಪತ್ರದ ಆರಂಭದಲ್ಲಿಯೇ, ” ಅಪರಾಧ ಸಂಖ್ಯೆ 16 / 14ರ ಆರೋಪಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಆಧಾರರಹಿತ ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ. ನಮ್ಮನ್ನು ಎದೆಗುಂದುವಂತೆ ಮಾಡಲು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಲಾಗುತ್ತಿದೆ. ಆರೋಪಿ ವಿರುದ್ಧ ಎಸ್‌ಐಟಿ ಪ್ರಾಸಿಕ್ಯೂಶನ್‌ ಅನುಮತಿ ಪಡೆದಿದೆ. ಈ ಆರೋಪಿ ಜಾಮೀನು ಪಡೆದು ಹೊರಗಿದ್ದಾರೆ. ಎಸ್‌ಐಟಿ ಮುಖ್ಯಸ್ಥನಾಗಿ ನಾನು ಯಾವುದೇ ಭಯವಿಲ್ಲದೆ ಕರ್ತವ್ಯ ನಿರ್ವಹಿಸಿ ಪ್ರಕರಣದ ಆರೋಪಿಗಳಿಂದ ಸತ್ಯ ಹೊರತರುತ್ತೇನೆ. ಜತೆಗೆ, ನಾನು ಹೊರಗಿನ ಬಾಹ್ಯ ಪ್ರಭಾವಗಳಿಂದಲೂ ನಿಮ್ಮನ್ನು ರಕ್ಷಿಸುತ್ತೇನೆ,” ಎಂದು ತನಿಖಾ ತಂಡಕ್ಕೆ ಧೈರ್ಯ ಹೇಳಿದ್ದಾರೆ.