ಪೇಟೆಗೆ ಬಂದು ಕಳ್ಳತನ, ಕಾಡಿನ ಬಂಡೆ ಮತ್ತು ಮರಗಳ ಮೇಲೆ ವಾಸ..! ವಿಚಿತ್ರ ಕಳ್ಳನನ್ನು ಸೆರೆಹಿಡಿದ ಪೊಲೀಸರು..!

ನ್ಯೂಸ್ ನಾಟೌಟ್: ಕಾಡಿನಲ್ಲಿ ವಾಸ ಮಾಡಿ ಬೆಂಗಳೂರಿನಲ್ಲಿ ಒಂಟಿ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ಬಂದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕದ್ದ ಆಭರಣಗಳೊಂದಿಗೆ ಕಾಡಿಗೆ ತೆರಳಿ ಅಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನ ಗಿರಿನಗರ ಪೊಲೀಸರು ಕಳ್ಳನನ್ನು ಸೆರೆ ಹಿಡಿದಿದ್ದಾರೆ.ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದನು. ಇತ್ತೀಚೆಗೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಕದ್ದ ಆಭರಣ ಸಮೇತ ಕಾಡಿನಲ್ಲಿ ವಾಸವಾಗಿದ್ದನ್ನು ಪತ್ತೆ ಮಾಡಿದ್ದಾರೆ. ನಗರದಲ್ಲಿ ಕಳ್ಳತನ ಮಾಡಿ ಕಾಡಿನಲ್ಲಿ ವಾಸ ಮಾಡುತ್ತಿದ್ದ ಕುಖ್ಯಾತ ಕಳ್ಳ ನರಸಿಂಹಾರೆಡ್ಡಿ ಎಂದು ಗುರುತಿಸಲಾಗಿದೆ. ಈತ ಎರಡು ಕಾಡುಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದನು. ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ ನಲ್ಲಿ ತಲೆಮರೆಸಿಕೊಳ್ಳುತ್ತಿದ್ದನು ಎನ್ನಲಾಗಿದೆ. ಈತ ಹಗಲಿನಲ್ಲಿ ಕಾಡಿನ ಬಂಡೆಗಳ ಮೇಲೆ ಹಾಗೂ ರಾತ್ರಿ ವೇಳೆ ಮರಗಳ ಮೇಲೆ ಮಲಗುತ್ತಿದ್ದನು. ಅಷ್ಟೇ ಅಲ್ಲದೇ ಈತ ಆಗಾಗ ಸಿಟಿಗೆ ಬಂದು ಸುತ್ತಾಡಿ ಒಂಟಿ ಮನೆಗಳು ಹಾಗೂ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ರಾತ್ರಿ ಬಂದು ಕಳ್ಳತನ ಮಾಡುತ್ತಿದ್ದನು. ನಂತರ ಪೊಲೀಸರಿಗೆ ಸಿಗದೇ ಕಾಡಿಗೆ ಹೋಗಿ ವಾಸ ಮಾಡುತ್ತಿದ್ದನು. ಬಂಧಿತನಿಂದ ಬರೋಬ್ಬರಿ 70 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. Click