ಉಜಿರೆ: ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ, ಮಣ್ಣಿನ ಸಿನಿಮಾ ರೀಲ್ ಹರಕೆಯಾಗಿ ನೀಡಿದ ದಂಪತಿ

ನ್ಯೂಸ್‌ ನಾಟೌಟ್‌: ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಮೇತ ಭೇಟಿ ನೀಡಿ ಮಂಗಳವಾರ(ಆ.6) ದೇವರ ಆಶಿರ್ವಾದ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಭಕ್ತ ಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವ ರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯವಾಗಿದೆ. ಅದೇ ರೀತಿ ಮಣ್ಣಿನ ಸಿನಿಮಾ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆಯನ್ನು ಯಶ್ ದಂಪತಿ ತೀರಿಸಿದ್ದಾರೆ.ಇಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಯಶ್ ದಂಪತಿ ಜೊತೆ ದೇಗುಲಕ್ಕೆ ಬಂದಿದ್ದರು. ಸುರ್ಯ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ. ದೇಗುಲಕ್ಕೆ ಬಂದಿದ್ದ ಯಶ್ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಹಾಗೂ ಯಥರ್ವ್ ಸುರ್ಯ ಸದಾಶಿವ ರುದ್ರ ದೇವಸ್ಥಾನದ ಆಡಳಿತ ವರ್ಗದಿಂದ ಗೌರವ ಸ್ವೀಕರಿಸಿದರು.