ಕೃಷ್ಣ ಜನ್ಮಾಷ್ಟಮಿಗೆ ದೇವಸ್ಥಾನಕ್ಕೆ ಹೋದ ಬಾಲಕಿಯರ ನಿಗೂಢ ಸಾವು..! ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಶವಗಳು ಪತ್ತೆ..!

ನ್ಯೂಸ್ ನಾಟೌಟ್ : ಇಬ್ಬರು ಬಾಲಕಿಯರ ಶವಗಳು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉತ್ತರ ಪ್ರದೇಶದ ಫರೂಕಾಬಾದ್‌ ನ ಕೋಟ್ವಾಲಿ ಕೈಮ್‌ಗಂಜ್ ಪ್ರದೇಶದ ಭಗೌತಿಪುರ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಆ ಇಬ್ಬರು ಹೆಣ್ಣು ಮಕ್ಕಳು ಕೃಷ್ಣ ಜನ್ಮಾಷ್ಟಮಿ ನಿಮಿತ್ತ ದೇವಸ್ಥಾನಕ್ಕೆ ಹೋಗಿದ್ದರು. ತಡರಾತ್ರಿಯಾದರೂ ದೇವಸ್ಥಾನದಿಂದ ವಾಪಸ್ ಬಾರದೆ ಇದ್ದಾಗ ಕುಟುಂಬಸ್ಥರು ಅವರಿಬ್ಬರೂ ಅವರ ಚಿಕ್ಕಮ್ಮನ ಮನೆಯಲ್ಲಿ ತಂಗಿದ್ದಾರೆಂದುಕೊಂಡು ಸುಮ್ಮನಾಗಿದ್ದರು. ಆದರೆ, ಮರುದಿನ ಆ ಇಬ್ಬರು ಯಾವ ಸಂಬಂಧಿಕರ ಮನೆಗೂ ಹೋಗಿಲ್ಲ ಎಂಬುದು ಮನೆಯವರಿಗೆ ಗೊತ್ತಾಗಿದೆ. ಇದರಿಂದ ಆತಂಕಗೊಂಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟರ ವೇಳೆಗೆ ದೇವಸ್ಥಾನವಿದ್ದ ಗ್ರಾಮದ ಮರದಲ್ಲಿ ಇಬ್ಬರು ಹೆಣ್ಣುಮಕ್ಕಳ ಶವಗಳು ನೇತಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.ಬಾಲಕಿಯರಿಬ್ಬರ ಶವ ಒಂದೇ ದುಪಟ್ಟಾದಲ್ಲಿ ನೇತಾಡುತ್ತಿರುವುದನ್ನು ಕಂಡು ಗ್ರಾಮಸ್ಥರಲ್ಲಿ ಸಂಚಲನ ಮೂಡಿಸಿದೆ. ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಶವಗಳನ್ನು ನೇಣು ಹಾಕಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಪೊಲೀಸರು ಎರಡೂ ಶವಗಳನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. Click