ಬಾಂಗ್ಲಾ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ನೇಮಕ..! ಬಾಂಗ್ಲಾದೇಶದ ಸೇನೆ ಇವರಿಗೆ ಬೆಂಬಲ ನೀಡಿದ್ದೇಕೆ..?

ನ್ಯೂಸ್‌ ನಾಟೌಟ್‌: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ, ಗ್ರಾಮೀಣ ಬ್ಯಾಂಕ್‌ ಸ್ಥಾಪಿಸಿದ್ದ ಮೊಹಮ್ಮದ್‌ ಯೂನುಸ್‌ (Muhammad Yunus) ಬಾಂಗ್ಲಾದೇಶ ಸರ್ಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.ಸಂಸತ್ತನ್ನು ವಿಸರ್ಜಿಸಿದ ಬೆನ್ನಲ್ಲೇ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಬುಧವಾರ(ಆ.7) ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಸಂಸತ್ತನ್ನು ವಿಸರ್ಜಿಸಿದ ಬಳಿಕ ಶಹಾಬುದ್ದೀನ್ ರಕ್ಷಣಾ ಪಡೆಯ ಮೂರೂ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ 13 ಸದಸ್ಯರೊಂದಿಗೆ ಮಧ್ಯಂತರ ಸರ್ಕಾರದ ರಚನೆ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಯೂನುಸ್‌ ಅವರಿಗೆ ಅಧಿಕಾರ ನೀಡಬೇಕೆಂದು ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ ಎಂಬುದಾಗಿ ವಿದ್ಯಾರ್ಥಿ ನಾಯಕ ನಹೀದ್‌ ಇಸ್ಲಾಂ ಹೇಳಿದ್ದರು. ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿದ ನಂತರ ಮಧ್ಯಂತರ ಸರ್ಕಾರದ ಇತರ ಸದಸ್ಯರನ್ನು ಅಂತಿಮಗೊಳಿಸಲಾಗುವುದು ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಜಾಯ್ನಲ್ ಅಬೆದಿನ್ ಹೇಳಿದ್ದಾರೆ. ಯೂನುಸ್ ಅವರಿಗೆ ಬಾಂಗ್ಲಾದೇಶದ ಸೇನೆ (Bangladesh Army) ಬೆಂಬಲ ನೀಡಿದ್ದರಿಂದ ಸದ್ಯ ತಲೆದೋರಿರುವ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದಂತಾಗಿದೆ.ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಯೂನುಸ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದರು. ವಿದ್ಯಾರ್ಥಿಗಳ ಮನವಿಯನ್ನು ಸೋಮವಾರ ಯೂನುಸ್‌ ಪುರಸ್ಕರಿಸಿದ್ದರು. ಯೂನುಸ್‌ ಕಡೆಯಿಂದ ಒಪ್ಪಿಗೆ ಸಿಕ್ಕಿದ ಬೆನ್ನಲ್ಲೇ ಅವರನ್ನು ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.