ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ಬಹುಕೋಟಿ ಆಸ್ತಿ ಕಬಳಿಕೆ..? 21.5 ಎಕರೆ ದೇಗುಲದ ಭೂಮಿ ಮಾರಾಟಕ್ಕೆ ಕಸರತ್ತು..!

ನ್ಯೂಸ್ ನಾಟೌಟ್ : ಇತ್ತೀಚೆಗೆ ಬಹುಕೋಟಿ ಭೂ ಹಗರಣ ಆರೋಪಗಳು ಒಂದರ ಹಿಂದೆ ಒಂದರಂತೆ ತೆರೆದುಕೊಳ್ಳುತ್ತಿವೆ. ಮಂಡ್ಯ ಜಿಲ್ಲೆಯ ಪಾಂಡವಪುರದ ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಆಸ್ತಿ ಭೂಗಳ್ಳರ ಪಾಲಾಗುತ್ತಿದೆ ಎಂದು ಆರೋಪಿಸಲಾಗಿದೆ. ನೂರಾರು ಕೋಟಿ ಆಸ್ತಿ ಕಬಳಿಸಲು ಸಂಚು ಹಾಕಲಾಗಿದ್ದು ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಭೂಗಳ್ಳರಿಗೆ ಅಕ್ರಮ ಪರಭಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಚೆಲುವನಾರಾಯಣ ಸ್ವಾಮಿಯ ಭಕ್ತರಾಗಿರುವ ರವಿಕುಮಾರ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಕೆಸರೆ ಗ್ರಾಮ ವ್ಯಾಪ್ತಿಯಲ್ಲಿ 21.5 ಎಕರೆ ಭೂಮಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕೆಸರೆ ಗ್ರಾಮದ ಸರ್ವೆ ನಂಬರ್ 396, 397, 398 ಹಾಗೂ 399ಕ್ಕೆ ಸೇರಿದ ಭೂಮಿಯನ್ನು ಮಂಡ್ಯ ಜಿಲ್ಲೆ ನಗುವಿನಹಳ್ಳಿ ಗ್ರಾಮದ ಗೋಸೇಗೌಡ ಕುಟುಂಬ ದೇಗುಲಕ್ಕೆ ದೇಣಿಗೆಯಾಗಿ ನೀಡಿತ್ತು. ಆದರೆ ದೇವಾಲಯಕ್ಕೆ ಸೇರಿದ ಈ ಜಮೀನನ್ನು ಅನ್ಯರಿಗೆ ಪರಭಾರೆ ಮಾಡುವಲ್ಲಿ ಕಂದಾಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಮೀನನ್ನ ಮತ್ತೆ ದೇವಾಲಯದ ಹೆಸರಿಗೆ ವರ್ಗಾಯಿಸುವಂತೆ ದೂರುದಾರ ರವಿಕುಮಾರ್ ಆಗ್ರಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ರವಿಕುಮಾರ್, ಮೇಲುಕೋಟೆ ದೇವಸ್ಥಾನದ ಆಸ್ತಿಯನ್ನು ಪುನರ್ ಸ್ಥಾಪಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಮಂಡ್ಯ ಜಿಲ್ಲಾಡಳಿತ ದಾಖಲೆ ಪರಿಶೀಲನೆ ನಡೆಸಿದೆ. Click