ರಾಹುಲ್‌ ಗಾಂಧಿಗೆ ಬಾಗಿಲು ಹಾಕಿ ಕೆನ್ನೆಗೆ ಬಾರಿಸ್ಬೇಕು, ಅವನೊಬ್ಬ ಹುಚ್ಚ ಎಂದಿದ್ದ ಭರತ್‌ ಶೆಟ್ಟಿ ವಿರುದ್ಧ ಎಫ್‌.ಐ.ಆರ್‌..! ವಿಚಾರಣೆಗೆ ಬರುವಂತೆ ಶಾಸಕನಿಗೆ ಪೊಲೀಸ್ ನೋಟಿಸ್‌..!

ನ್ಯೂಸ್ ನಾಟೌಟ್: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಈಗ ಎಫ್‌ಐಆರ್‌ ದಾಖಲಾಗಿದ್ದು, ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಮೂರು ದಿನಗಳ ಒಳಗೆ ತನಿಖಾಧಿಕಾರಿ ಎದುರು ಹಾಜರಾಗಿ ವಿಚಾರಣೆ ಎದುರಿಸುವಂತೆ ಕಾವೂರು ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಬೈಂದೂರು ನೋಟಿಸ್‌ ಜಾರಿ ಮಾಡಿದ್ದಾರೆ. ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಅನಿಲ್ ಕುಮಾರ್ ದೂರಿನ ಮೇಲೆ ಭರತ್‌ ಶೆಟ್ಟಿ ಮೇಲೆ ಭಾರತೀಯ ನ್ಯಾಯ ಸಂಹಿತೆಯ 351(3), 353 ಸೆಕ್ಷನ್ ಅಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಮಂಗಳೂರಿನ ಕಾವೂರಿನಲ್ಲಿ ಸೋಮವಾರ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಭರತ್‌ ಶೆಟ್ಟಿ ರಾಹುಲ್‌ ಗಾಂಧಿ ವಿರುದ್ಧ ಮಾತನಾಡಿದ್ದು, ‘ಹಿಂದೂ ವಿರೋಧಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿಗೆ ಪಾರ್ಲಿಮೆಂಟ್‌ ಒಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಬೇಕು. ಆಗ ಎಲ್ಲವೂ ಸರಿಹೋಗುತ್ತೆ. ಆಗ ಇದಕ್ಕೆ ಏಳೆಂಟು ಎಫ್‌ಐಆರ್ ದಾಖಲಾಗ್ತಿತ್ತು ಅಷ್ಟೇ. ಮಂಗಳೂರಿಗೆ ಬಂದ್ರೆ ನಾವೇ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದರು. ಆ ಹುಚ್ಚನಿಗೆ ಶಿವ 3ನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ. ಅವರು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾರೆ ಎಂದೆಲ್ಲಾ ಹೇಳಿಕೆ ನೀಡಿದ್ದರು. ಈ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ.