ಲೋಕ ಸಮರದಲ್ಲಿ ಸೋತ ಕೇಂದ್ರದ ಪ್ರಮುಖ ಸಚಿವರ ಪಟ್ಟಿ ಇಲ್ಲಿದೆ, ನಿರೀಕ್ಷೆಯೇ ಇಲ್ಲದ ಘಟಾನುಘಟಿಗಳು ಮನೆಗೆ..!

ನ್ಯೂಸ್ ನಾಟೌಟ್: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಇದರಲ್ಲಿ ಬಿಜೆಪಿಯ ಪ್ರಮುಖರಾದ ಸ್ಮೃತಿ ಇರಾನಿ, ಅರ್ಜುನ್‌ ಮುಂಡಾ, ಅಜಯ್‌ ಮಿಶ್ರಾ ಟೆನಿ, ಕೈಲಾಶ್ ಚೌಧರಿ ಹಾಗೂ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಹಲವು ಮಂದಿ ಸೋಲನುಭವಿಸಿದ್ದು ಯಾವ ಪಕ್ಷಕ್ಕೂ ಮತದಾರ ಪೂರ್ಣ ಬಹುಮತ ನೀಡಲಿಲ್ಲ. ಈ ಪ್ರಮುಖರ ಭಾರೀ ಸೋಲಿನಿಂದಾಗಿ ಬಿಜೆಪಿಯು ತನ್ನ ಎನ್‌ಡಿಎ ಮೈತ್ರಿ ಒಕ್ಕೂಟದ ಮೇಲೆ ಸರ್ಕಾರ ರಚನೆಗೆ ಒಲವು ತೋರುವಂತೆ ಮಾಡಿದೆ. 2014 ಮತ್ತು 2019 ರಲ್ಲಿ ಬಿಜೆಪಿಯು ಕ್ರಮವಾಗಿ 282 ಮತ್ತು 303 ಸ್ಥಾನಗಳನ್ನು ಗಳಿಸಿ ತನ್ನದೇ ಆದ ಸ್ಪಷ್ಟ ಬಹುಮತವನ್ನು ಸಾಧಿಸಿತು. ಆದರೆ ಈ ಬಾರಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದರೆ ಇಂಡಿಯಾ (INDIA) ಮೈತ್ರಿಕೂಟ 234 ಸ್ಥಾನಗಳನ್ನು ಗೆದ್ದುಕೊಂಡಿದೆ. ಸರ್ಕಾರ ರಚನೆಗೆ 272 ಸ್ಥಾನಗಳ ಅಗತ್ಯವಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ 1,67,196 ಮತಗಳ ಅಂತರದಿಂದ ಸೋತಿದ್ದಾರೆ. ಈ ಸೋಲು ಅಮೇಥಿಯಲ್ಲಿ ಒಂದು ಯುಗವನ್ನೇ ಅಂತ್ಯಗೊಳಿಸಿದೆ. ವಿವಾದಾತ್ಮಕ ಲಖಿಂಪುರ ಖೇರಿ ಘಟನೆಯಲ್ಲಿ ಸಿಲುಕಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿಯವರನ್ನು ಸಮಾಜವಾದಿ ಪಕ್ಷದ ಉತ್ಕರ್ಷ್ ವರ್ಮಾ 34,329 ಮತಗಳಿಂದ ಸೋಲಿಸಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ಜಾರ್ಖಂಡ್‌ನ ಖುಂಟಿ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. *ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ರಾಜಸ್ಥಾನದ ಬಾರ್ಮರ್‌ನಲ್ಲಿ ಕಾಂಗ್ರೆಸ್‌ನ ಉಮ್ಮೇದ ರಾಮ್ ಬೇನಿವಾಲ್ ಅವರಿಗಿಂತ 4.48 ಲಕ್ಷ ಮತಗಳಿಂದ ಹಿನ್ನಡೆ ಸಾಧಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಕೈಲಾಶ್‌ ಗೆ 2,86,733 ಮತಗಳು ಬಿದ್ದಿವೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೇರಳದ ತಿರುವನಂತಪುರದಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ 16,077 ಮತಗಳ ಅಂತರದಿಂದ ಸೋತಿದ್ದಾರೆ ಎಂದು ಮಾಹಿತಿಗಳು ದೊರೆತಿವೆ. Click 👇