ಬೈಕ್‌ ಬಿಟ್ಟು ಬಂದಿದ್ದಕ್ಕೆ ಹೆಲ್ಮೆಟ್‌ ನಿಂದ ತಂದೆಗೆ ಹೊಡೆದ ಮಗ..! ಮಗನನ್ನೇ ಇರಿದು ಕೊಂದ ತಂದೆ..!

ನ್ಯೂಸ್ ನಾಟೌಟ್: ಬೈಕ್ ಅನ್ನು ಎಲ್ಲೋ ಬಿಟ್ಟು ಮನೆಗೆ ಬಂದಿದ್ದ ವಿಚಾರಕ್ಕೆ ಜಗಳ ನಡೆದು ತಂದೆಯೇ ಮಗನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಅನ್ನಪೂರ್ಣೇಶ್ವರಿ ನಗರದ ಮುದ್ದನಪಾಳ್ಯದಲ್ಲಿ ನಡೆದಿದೆ. ಅಂಜನ್ ಕುಮಾರ್(27) ಕೊಲೆಯಾದ ಮಗ ಎಂದು ಗುರುತಿಸಲಾಗಿದೆ. ಆತನ ತಂದೆ ವೆಂಕಟೇಶ್ (57) ಬಂಧಿತ ಆರೋಪಿ ಎನ್ನಲಾಗಿದೆ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ವೆಂಕಟೇಶ್ ತನ್ನ ಕುಟುಂಬದ ಜೊತೆಗೆ ಮುದ್ದನಪಾಳ್ಯದಲ್ಲಿ ನೆಲೆಸಿದ್ದು, ರಿಯಲ್ ಎಸ್ಟೇಟ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದ. ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ಮಗ ಅಂಜನ್‌ ಪಿಯುಸಿ ಮೊಟಕುಗೊಳಿಸಿ ಮನೆಯಲ್ಲಿ ಇರುತ್ತಿದ್ದ ಎನ್ನಲಾಗಿದೆ. ಭಾನುವಾರ(ಜೂ.9) ಸಂಜೆ ವೆಂಕಟೇಶ್‌ ಮಗಳ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಗೆ ಹೋಗಿದ್ದರು. ಆದರೆ ರಾತ್ರಿ ದ್ವಿಚಕ್ರ ವಾಹನದ ಜೊತೆ ಮನೆಗೆ ಬಂದಿರಲಿಲ್ಲ ಎನ್ನಲಾಗಿದೆ. ಬೈಕ್ ವಿಚಾರವಾಗಿ ಅಂಜನ್ ಕುಮಾರ್, ತಂದೆ ವೆಂಕಟೇಶ್‌ ನನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ವೆಂಕಟೇಶ್‌ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾನೆ. ಈ ವಿಚಾರದ ಬಗ್ಗೆ ಮಾತಿಗೆ ಮಾತು ಬೆಳೆದು ಅಂಜನ್‌ ಹೆಲ್ಮೆಟ್‌ನಿಂದ ತಂದೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ತನ್ನ ಮೇಲೆಯೇ ಮಗ ಹೊಡೆದಿದ್ದಕ್ಕೆ ಸಿಟ್ಟಾದ ತಂದೆ ವೆಂಕಟೇಶ್‌ ಅಡುಗೆ ಮನೆಗೆ ತೆರಳಿ ಚಾಕು ತಂದು ಅಂಜನ್ ಎದೆಗೆ ಇರಿದಿದ್ದಾರೆ ಎನ್ನಲಾಗಿದೆ. ವಿಪರೀತ ರಕ್ತಸ್ರಾವದಿಂದಾಗಿ ಅಂಜನ್‌ ಅಲ್ಲೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.