ಮಡಿಕೇರಿ: ರಾತ್ರೋರಾತ್ರಿ 15ರ ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಆರೋಪಿ ಪರಾರಿ..! ದೇಹದ ಭಾಗಗಳಿಗಾಗಿ ಹುಡುಕಾಟ..!

ನ್ಯೂಸ್ ನಾಟೌಟ್: ಬಾಲಕಿಯ ಜೊತೆ ನಿಶ್ಚಿತಾರ್ಥ ತಪ್ಪಿದ ಬಳಿಕ15 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದ ಪ್ರಕಾಶ್ (32) ಎಂಬಾತ ಗುರುವಾರ(9 ಮೇ) ರಾತ್ರಿ ರುಂಡದೊಂದಿಗೆ ಪರಾರಿಯಾಗಿದ ಘಟನೆ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಮುಟ್ಲು ಗ್ರಾಮದಲ್ಲಿ ನಡೆದಿದೆ. ‘ಬಾಲಕಿಗೆ ಆರೋಪಿ ಪ್ರಕಾಶ್ ಜತೆ ಮದುವೆ ನಿಶ್ಚಯವಾಗಿ ಗುರುವಾರ ನಿಶ್ಚಿತಾರ್ಥ ನಡೆಯುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಡೆದು ಬಾಲ್ಯ ವಿವಾಹ ಮಾಡಬಾರದು ಎಂದು ಪೋಷಕರ ಮನವೊಲಿಸಿದ್ದಾರೆ. ನಂತರ ರಾತ್ರಿ ಮನೆಗೆ ನುಗ್ಗಿದ ಆರೋಪಿಯು ಬಾಲಕಿಯನ್ನು ಅಪಹರಿಸಿದ್ದಾನೆ.‌ ಕಾಡಂಚಿನ ಪ್ರದೇಶದಲ್ಲಿ ಬಾಲಕಿಯನ್ನು‌ ಕೊಂದು ರುಂಡದೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಾಲಕಿಯ ಮುಂಡ ಮಾತ್ರ ಸಿಕ್ಕಿದ್ದು ಆರೋಪಿಗಾಗಿ ಹಾಗೂ ದೇಹದ ಉಳಿದ ಭಾಗಗಳಿಗಾಗಿ ಹುಡುಕಾಟ ನಡೆದಿದೆ. ಸಮೀಪದ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಗುರುವಾರವಷ್ಟೇ ಉತ್ತೀರ್ಣಳಾಗಿದ್ದಳು. ಆ ಶಾಲೆಯಲ್ಲಿದ್ದ ಏಕೈಕ ವಿದ್ಯಾರ್ಥಿನಿ‌ ಈಕೆ ಆಗಿದ್ದಳು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ಘಟನೆಯಲ್ಲಿ ಬಾಲಕಿಯ ತಾಯಿಗೂ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.