Threat case: ಇನ್ಸ್​ಪೆಕ್ಟರ್ ಮತ್ತು ಎಸಿಪಿಗೆ ಪೊಲೀಸ್​ ಪೇದೆಯಿಂದಲೇ ಕೊಲೆ ಬೆದರಿಕೆ..! ರೌಡಿಶೀಟರ್ ಹತ್ಯೆಯ ವೇಳೆ ಕರ್ತವ್ಯಲೋಪ ಎಸಗಿದ್ದ ಪೇದೆ ಬೆದರಿಕೆ ಹಾಕಿದ್ದೇಕೆ..?

ನ್ಯೂಸ್ ನಾಟೌಟ್: ರಕ್ಷಕರಿಗೇ ರಕ್ಷಣೆಯ ಅವಶ್ಯಕತೆಯ ವಿಚಿತ್ರ ಕೇಸ್ ವೊಂದು ಬೆಳಕಿಗೆ ಬಂದಿದೆ. ಅಮಾನತು ಶಿಕ್ಷಿಗೆ ಶಿಫಾರಸು ಮಾಡಿದ್ದಾರೆ ಎಂಬ ಕೋಪಕ್ಕೆ ಬಾಣಸವಾಡಿ ಠಾಣೆಯ ಇನ್ಸ್​ಪೆಕ್ಟರ್ ಮತ್ತು ಎಸಿಪಿಗೆ ಪೊಲೀಸ್​ ಪೇದೆ ಚಾಕುವಿನಿಂದ ಇರಿದು ಕೊಲೆ‌ ಮಾಡೋದಾಗಿ ಜೀವ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೇಣುಕಾ ನಾಯಕ್ ಜೀವ ಬೆದರಿಕೆ ಹಾಕಿದ ಪೊಲೀಸ್​ ಪೇದೆ ಎಂದು ತನಿಖೆಯಲ್ಲಿ ಬಯಲಾಗಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರೌಡಿಶೀಟರ್ ಕಾರ್ತಿಕೇಯನ್ ಹತ್ಯೆಯಾಗಿತ್ತು. ಈ ಕೃತ್ಯದಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಪೊಲೀಸ್​ ಪೇದೆಗಳಾದ ಸಂತೋಷ್, ಪುಟ್ಟಸ್ವಾಮಿ, ವಿನೋದ್​ ರನ್ನು ಪೂರ್ವವಿಭಾಗದ ಡಿಸಿಪಿ ಕುಲದೀಪ್​ ಕುಮಾರ್ ಆರ್​. ಜೈನ್​ ಅಮಾನತುಗೊಳಿಸಿದ್ದರು ಎನ್ನಲಾಗಿದೆ. ಬೆದರಿಕೆ ಹಾಕಿದ್ದ ಪೊಲೀಸ್​ ಪೇದೆ ರೇಣುಕಾ ನಾಯಕ್ ರನ್ನೂ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಈ ವಿಷಯ ತಿಳಿದು ಬಾಣಸವಾಡಿ ಉಪ ವಿಭಾಗದ ಎಸಿಪಿ ಹಾಗೂ ಇನ್ಸ್​ಪೆಕ್ಟರ್​ ಗೆ ಪೇದೆ ರೇಣುಕಾ ನಾಯಕ್​ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಎಸಿಪಿ, ಕೊನೆ ಕ್ಷಣದಲ್ಲಿ ತಮ್ಮ ಶಿಫಾರಸು ಹಿಂಪಡೆದು. ಒಂದು ತಿಂಗಳು ರಜೆ ಕೊಟ್ಟು ಕಳಿಸಿದ್ದರು ಎಂದು ತಿಳಿದುಬಂದಿದೆ. ಈ ಪ್ರಕರಣ ತಿಳಿದು ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್​ ಆಯುಕ್ತ ಬಿ. ​ದಯಾನಂದ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.