ಬರೋಬ್ಬರಿ 7.25 ಕೋಟಿ ಮೌಲ್ಯದ 2000 ಮುಖಬೆಲೆಯ ನಕಲಿ ನೋಟುಗಳು ಪತ್ತೆ!!

ನ್ಯೂಸ್‌ ನಾಟೌಟ್‌ : ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾಗಿದೆ. ಹೀಗಾಗಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಿದೆ. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣ ಇನ್ನಿತರ ಚುನಾವಣಾ ಅಕ್ರಮ ತಡೆಯಲು ಕಟ್ಟೆಚ್ಚರ ವಹಿಸಿದ್ದಾರೆ.ಈಗಾಗ್ಲೇ ರಾಜ್ಯಾದ್ಯಂತ ಕೋಟ್ಯಂತರ ರೂಪಾಯಿ ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ನಡುವೆ ದಕ್ಷಿಣ ಕನ್ನಡದ, ಕೇರಳ ಗಡಿಭಾಗದ ಕಾಸರಗೋಡು ಜಿಲ್ಲೆಯ ಗುರಪುರ ಎಂಬಲ್ಲಿ ಬರೋಬ್ಬರಿ 7.25 ಕೋಟಿ ಮೌಲ್ಯದ 2000 ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಗಲ್ಫ್‌ ಉದ್ಯೋಗಿಯಾಗಿರುವ ಕೆಪಿ ಬಾಬು ರಾಜ್ ಎಂಬುವವರ ಮಾಲೀಕತ್ವದ ಮನೆಯಲ್ಲಿ ಪತ್ತೆಯಾಗಿರುವ 2000 ಮುಖಬೆಲೆ ಕೋಟ್ಯಂತರ ರೂಪಾಯಿ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾಗಿವೆ. ಪಾಣತ್ತೂರು ಪಣತ್ತಡಿಯ ಅಬ್ದುಲ್ ರಝಾಕ್ ಎಂಬವರು ಈ ಮನೆಯನ್ನು ಬಾಡಿಗೆಗೆ ನೀಡಿದ್ದರು ಎನ್ನಲಾಗಿದೆ.ಮನೆಯಲ್ಲಿ ನಿಷೇಧಿತ ನೋಟುಗಳಿರುವ ಬಗ್ಗೆ ಪೊಲೀಸರು ಖಚಿತ ಮಾಹಿತಿ ಪಡೆದುಕೊಂಡೇ ಕಳೆದ ಎರಡುಮೂರು ದಿನಗಳಿಂದ ಮನೆಯ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಬುಧವಾರ ದಾಳಿ ನಡೆಸಿ ಎರಡು ಕೋಣೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದ ರಾಜ್ಯ ಸರ್ಕಾರ ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಪತ್ತೆಯಾಗಿರುವುದಕ್ಕೆ ಹಲವು ಅನುಮಾನಗಳನ್ನು ಹುಟ್ಟು ಹಾಕಿಸಿದೆ. ಮನೆಯಲ್ಲಿ ಕೋಟ್ಯಂತರ ಮೌಲ್ಯದ ಮೌಲ್ಯದ ನೋಟುಗಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಂಬಲತ್ತರ ಪೊಲೀಸರು ಮನೆಯ ಮೇಲೆ ನಿಗಾ ಇಟ್ಟಿದ್ದರು.ನೋಟುಗಳನ್ನು ಪೂಜಾ ಕೋಣೆ, ಹಾಲ್‌ನಲ್ಲಿ ಚೀಲಗಳಲ್ಲಿ ತುಂಬಿ ಇರಿಸಲಾಗಿತ್ತು ಎಂಬುದರ ಬಗ್ಗೆ ವರದಿಯಾಗಿದೆ. ಪೂಜಾ ಕೋಣೆ ತಪಾಸಣೆ ನಡೆಸಿದಾಗ ಹೆಚ್ಚಿನ ನೋಟುಗಳು ಪತ್ತೆಯಾಗಿವೆ. ಘಟನೆ ಸಂಬಂಧ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಪರಪಳ್ಳಿಯ ಬಾಬುರಾಜ್ ವಿಚಾರಣೆಗೆ ಗೈರಾಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಬಾಬುರಾಜ್, ಪೊಲೀಸರು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.