ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ ಕಾರಣದಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಭಾರಿ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗಳ ನಡುವೆ ಶೀತಲ ಸಮರ ಏರ್ಪಟ್ಟಿದೆ.
ಒಂದು ವೇಳೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಹಾಲಿ ಸಂಸದೆ ಸುಮಲತಾ ಸ್ಪರ್ಧೆ ಅತಂತ್ರವಾಗಲಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದಿಲ್ಲ ಎಂದಿರುವ ಸುಮಲತಾ, ಭಾನುವಾರ ತಮ್ಮ ನಿವಾಸದಲ್ಲಿ ಆಪ್ತರ ಜೊತೆ ಸರಣಿ ಚರ್ಚೆ ಮಾಡಿದ್ದಾರೆ. ತಮ್ಮ ಬೆಂಬಲಿಗರು, ಆಪ್ತರ ಜೊತೆ ಚರ್ಚೆ ಮಾಡುತ್ತಿರುವ ಸುಮಲತಾ, ಅಕಸ್ಮಾತ್ ಮಂಡ್ಯ ಜೆಡಿಎಸ್ ಪಾಲಾದರೆ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಇನ್ನು ಭಾನುವಾರ ಸರಣಿ ಚರ್ಚೆಯ ನಡುವೆಯೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೆಪಿ ನಗರದಲ್ಲಿರುವ ಸುಮಲತಾ ಅವರ ಮನೆಗೆ ಭೇಟಿ ನೀಡಿದ್ದು ಭಾರಿ ಕುತೂಹಲ ಮೂಡಿಸಿದೆ. ಅಭಿಷೇಕ್ ಅಂಬರೀಶ್ ಜೊತೆಗೂಡಿ ದರ್ಶನ್ ಸುಮಲತಾ ಮನೆಗೆ ಭೇಟಿ ನೀಡಿದ್ದಾರೆ. ಮಂಡ್ಯದಲ್ಲಿರುವ ಸುಮಲತಾ ಬೆಂಬಲಿಗರೂ ಕೂಡ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ದು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿನಲ್ಲಿ ನಟ ದರ್ಶನ್ ಮತ್ತು ಯಶ್ ಪಾತ್ರ ಪ್ರಮುಖವಾಗಿತ್ತು. ಈ ಇಬ್ಬರೂ ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಸುಮಲತಾ ಪರವಾಗಿ ಮತ ಯಾಚನೆ ಮಾಡಿದ್ದರು. ಆದರೆ ಈಗ ಯಶ್ ರಾಜಕೀಯದಿಂದ ದೂರ ದೂರ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ದರ್ಶನ್ ಅಂಬರೀಶ್ ಕುಟುಂಬದ ಅತ್ಯಾಪ್ತರಾಗಿದ್ದು ಅವರು ಈ ಬಾರಿ ಕೂಡ ಸುಮಲತಾ ಪರವಾಗಿ ಪ್ರಚಾರ ಮಾಡಲಿದ್ದಾರೆ. ಒಂದು ವೇಳೆ ಬಿಜೆಪಿಯಿಂದ ಸುಮಲತಾ ಸ್ಪರ್ಧೆಗೆ ಅವಕಾಶ ಸಿಗದೇ ಇದ್ದರೆ ಕಾಂಗ್ರೆಸ್ ಸೇರುವ ಆಯ್ಕೆ ಕೂಡ ಅವರ ಮುಂದಿದೆ ಎನ್ನಲಾಗಿದೆ. ಅಥವಾ ಕಳೆದ ಬಾರಿಯಂತೆ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಅವಕಾಶ ಇದೆ ಎನ್ನಲಾಗಿದೆ.