ನ್ಯೂಸ್ ನಾಟೌಟ್: ಪುರಾತತ್ತ್ವಶಾಸ್ತ್ರಜ್ಞರು ಹುಡುಕಾಟ ನಡೆಸಿದಾಗ ಈಗಾಗಲೇ ಕನ್ನಡ ಹಲವು ಶಾಸನಗಳು ಪತ್ತೆಯಾಗಿವೆ. ಇದೀಗ ತಮಿಳುನಾಡಿನಲ್ಲಿ ಕನ್ನಡ ಶಾಸನವೊಂದು ಪತ್ತೆಯಾಗಿದೆ.
ತಮಿಳು ನಾಡಿನ ತೇಣಿ ಜಿಲ್ಲೆಯ ವಿನಾಯಕ ದೇವಸ್ಥಾನವೊಂದರಲ್ಲಿ ಈ ಶಾಸನ ಪತ್ತೆಯಾಗಿದೆ.
ಮದುರೈನಲ್ಲಿ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯು ನಡೆಸಿದ ಮೊದಲ ಹಂತದ ಪುರಾತತ್ವ ತರಬೇತಿಗೆ ಹಾಜರಾದ ಸಿಲ್ವರ್ಪಟ್ಟಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಕೆ.ಭಾರತಿರಾಜ ಬಿ.ಟಿ. ಎಂಬವರು ಕೆಲವು ಪ್ರದೇಶಗಳಲ್ಲಿ ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಹುಡುಕಲು ಆರಂಭಿಸಿದರು. ಇದರ ಫಲವಾಗಿ ಇವರಿಗೆ ದೇವಾಲಯದಲ್ಲಿ ಕನ್ನಡ ಶಾಸನ ಲಭ್ಯವಾಗಿದೆ ಎನ್ನಲಾಗಿದೆ.
ರಾಮನಾಥಪುರ ಪುರಾತತ್ವ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ವಿ ರಾಜಗುರು ಅವರ ಪ್ರಕಾರ ʼವಿನಾಯಕ ದೇವಸ್ಥಾನದ ನೆಲಮಾಳಿಗೆಯಲ್ಲಿ 3 ಅಡಿ ಎತ್ತರ, 2½ ಅಡಿ ಅಗಲ ಮತ್ತು ½ ಅಡಿ ದಪ್ಪವಿರುವ ಕಲ್ಲಿನ ಚಪ್ಪಡಿ ಇದೆ. ಇದು ದೇವಾಲಯದ ಗೋಡೆಯೊಂದಿಗೆ ಸೇರಿಕೊಂಡಿದೆ. ಕಲ್ಲಿನ ಚಪ್ಪಡಿಯ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ ಮತ್ತು ಚಂದ್ರರನ್ನು ರೇಖೆಗಳಾಗಿ ಕತ್ತರಿಸಲಾಗಿದೆ. ಅದರ ಕೆಳಭಾಗದಲ್ಲಿ ನಾಲ್ಕು ಸಾಲುಗಲ್ಲಿ ಕನ್ನಡ ಶಾಸನವಿದೆʼ ಎಂದಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಚೆನ್ನೈ ವಿಭಾಗದ ಶಿಲಾಶಾಸನಕಾರ ಯೇಸು ಬಾಬು ಈ ಶಾಸನವನ್ನು ಓದಿದರು. ಈ ಶಾಸನವನ್ನು ಕನ್ನಡ ಭಾಷೆ ಹಾಗೂ ಲಿಪಿಯಲ್ಲಿ ಬರೆಯಲಾಗಿದ್ದು, ‘ಶ್ರೀ ಹಾಲಪಯ್ಯ ಗೌಡರ ಗ್ರಾಮ ವೇಲ್ಪರರ ಪಟ್ಟ’ ಎಂದು ಬರೆಯಲಾಗಿದೆಯಂತೆ. ಅಂದರೆ ಇದು 16ನೇ ಶತಮಾನದಲ್ಲಿ ಶ್ರೀ ಹಾಲಪಯ್ಯಗೌಡರ ಆಳ್ವಿಕೆಯೊಳಗಿನ ಗ್ರಾಮದ ಗಡಿ ಕಲ್ಲು ಎಂದು ಬರೆಯಲಾಗಿದೆ ಎನ್ನಲಾಗಿದೆ.