ಪ್ರೀತ್ಸೇ-ಪ್ರೀತ್ಸೇ ಎಂದು ಆಕೆಯ ಬೆನ್ನು ಬಿದ್ದಿದ್ದ ಆತ..! ಮನನೊಂದು ಆಕೆ ಆತ್ಮಹತ್ಯೆ..! ಇಲ್ಲಿದೆ ಸಂಪೂರ್ಣ ಕಹಾನಿ

ನ್ಯೂಸ್ ನಾಟೌಟ್‌: ಪ್ರೀತಿಸುವಂತೆ ಯುವತಿಯೊಬ್ಬಳಿಗೆ ನಿರಂತರ ಕಿರುಕುಳ ನೀಡಿ ಜನರ ಎದುರೇ ಯುವಕನೊಬ್ಬ ಅವಮಾನ ಮಾಡಿದ ಎಂಬ ಕಾರಣಕ್ಕೆ ಯುವತಿಯೊಬ್ಬಳು ಮನನೊಂದು ಯುವತಿ ನೇಣಿಗೆ ಶರಣಾದ ಘಟನೆ ಬೇಲೂರಿನ ನಿಡಗೂಡು ಗ್ರಾಮದಿಂದ ವರದಿಯಾಗಿದೆ. ಗ್ರಾಮದ ಜಯಣ್ಣ ಎಂಬವರ ಪುತ್ರಿ ಸಂಗೀತಾ (21) ಆತ್ಮಹತ್ಯೆಗೆ ಶರಣಾದಾಕೆ ಎಂದು ವರದಿ ತಿಳಿಸಿದೆ. ಅದೇ ಗ್ರಾಮದ ಹೊನ್ನಯ್ಯ ಎಂಬವರ ಪುತ್ರ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೇ ತನಗೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಸಂಗೀತಾ ಪೋಷಕರಲ್ಲಿ ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಸಂಗೀತಾ ಮನೆಯವರು ಈಗಲೇ ಮದುವೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಇಷ್ಟಾದರೂ ಶಿವು, ಸಂಗೀತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.ಜ.11 ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೆವಸ್ಥಾನಕ್ಕೆ ಸಂಗೀತಾ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ಶಿವು, ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಫೋನ್ ಮಾಡಿದರೂ ಏಕೆ ರಿಸೀವ್ ಮಾಡುವುದಿಲ್ಲ ಎಂದು ತಲೆಗೆ ಹೊಡೆದಿದ್ದಾನೆ. ನಂತರ ನನ್ನನ್ನು ಪ್ರೀತಿ ಮಾಡುವುದಿಲ್ಲವೆಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿ, ಫೋನ್ ಮಾಡಿದಾಗ ರಿಸೀವ್ ಮಾಡಬೇಕೆಂದು ವಾರ್ನಿಂಗ್ ಮಾಡಿದ್ದಾನೆ. ನನ್ನನ್ನು ಮದುವೆಯಾಗಲಿಲ್ಲ ಎಂದರೆ ನೀನು ಸತ್ತುಹೋಗು ಎಂದು ಜನರ ಎದುರೇ ಅವಮಾನ ಮಾಡಿ ಹೋಗಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ ಎನ್ನಲಾಗಿದೆ. ಇದೇ ನೋವಿನಿಂದ ಗ್ರಾಮಕ್ಕೆ ಬಂದ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.