ಕಾಂಗ್ರೆಸ್ ಗ್ಯಾರಂಟಿಗಳನ್ನು ಹಾಡಿ ಹೊಗಳಿದ ರಾಜ್ಯಪಾಲ, ಗಣರಾಜ್ಯೋತ್ಸವ ವೇದಿಕೆಯಲ್ಲಿ ರಾಜ್ಯ ಸರ್ಕಾರದ ಗುಣಗಾನ

ನ್ಯೂಸ್‌ ನಾಟೌಟ್‌ : ಸರ್ಕಾರ ನುಡಿದಂತೆ ನಡೆದಿದೆ. 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ. ಶಕ್ತಿ ಯೋಜನೆಯಲ್ಲಿ 134.34 ಕೋಟಿ ಜನ ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 2900.12 ಕೋಟಿ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗಣರಾಜ್ಯೋತ್ಸವ ವೇದಿಕೆಯಲ್ಲಿ ಹೇಳಿದ್ದಾರೆ. ಮಾತು ಮುಂದುವರಿಸಿದ ರಾಜ್ಯಪಾಲ ಗೃಹಜ್ಯೋತಿ ಯೋಜನೆ ಅಡಿ 1.50 ಕೋಟಿ ಗ್ರಾಹಕರು ಯೋಜನೆ ಫಲ ಪಡೆಯುತ್ತಿದ್ದಾರೆ. 700 ಕೋಟಿ ಗೃಹಜ್ಯೋತಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರು ನಗರದ ಮಾಣಿಕ್ ಶಾ ಗ್ರೌಂಡ್‍ನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗಣರಾಜ್ಯೋತ್ಸವದ ಶುಭ ಹಾರೈಸಿದರು. ರಾಜ್ಯದಲ್ಲಿ 223 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಎನ್‍ಡಿಆರ್ ಎಫ್‍ಗೆ ಅನುದಾನ ಕೋರಲಾಗಿದೆ. ರಾಜ್ಯ ಸರ್ಕಾರ ಬರ ಪರಿಹಾರವಾಗಿ ರೈತರಿಗೆ 2 ಸಾವಿರ ಮಧ್ಯಂತರ ಪರಿಹಾರ ನೀಡಲಾಗಿದೆ ಎಂದರು. ಕುಡಿಯುವ ನೀರು, ಮೇವು, ಪರಿಹಾರ ಕ್ರಮಗಳಿಗಾಗಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಬೆಳೆ ಸಮೀಕ್ಷೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ರೈತ ಸಿರಿ ಯೋಜನೆ ಅಡಿ ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ದಂತೆ ಗರಿಷ್ಠ2 ಹೆಕ್ಟೇರ್ ಗೆ ಪ್ರೋತ್ಸಾಹ ಧನ ನೀಡಲಾಗ್ತಿದೆ. ಕರ್ನಾಟಕ ಅನೀಮಿಯಾ ಮುಕ್ತ ರಾಜ್ಯ ಮಾಡಲು 185.74 ಕೋಟಿ ವೆಚ್ಚ ಮಾಡಲಾಗ್ತಿದೆ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 108 ಆರೋಗ್ಯ ಕವಚ ಯೋಜನೆ ಅಡಿ ಹೊಸದಾಗಿ 262 ಅಂಬುಲೆನ್ಸ್ ಖರೀದಿ ಮಾಡಲಾಗ್ತಿದೆ ಎಂದು ಹೇಳಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿ, ನಗರ ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ ಉಪಸ್ಥಿತರಿದ್ದರು ಎಂದು ವರದಿ ತಿಳಿಸಿದೆ.