ಬಾಳೆ ತೋಟದೊಳಗೆ ಏನಿದು ಚೆಲುವೆಯರ ಮೈಮಾಟ..? ಈ ರೈತನ ತೋಟಕ್ಕೆ ಇದನ್ನು ನೋಡಲೆಂದೇ ಹಲವರು ಬರುತ್ತಿರುವುದೇಕೆ?

ನ್ಯೂಸ್‌ ನಾಟೌಟ್‌: ಹಲವು ಕಡೆ ಬೆಳೆನಾಶವನ್ನು ತಪ್ಪಿಸಲು ಮತ್ತು ಜನರ ದೃಷ್ಟಿಯಿಂದ ಬೆಳೆಯನ್ನು ಕಾಪಾಡಲು ತೋಟಗಳಲ್ಲಿ ಬೆದರುಗೊಂಬೆಗಳು, ದೃಷ್ಟಿಗೊಂಬೆಗಳನ್ನು ಇಡುವುದು ಸಹಜ, ಆದರೆ ಇಲ್ಲೊಬ್ಬ ರೈತ ತನ್ನ ವಿಭಿನ್ನ ಯೋಚನೆಯಿಂದ ಸುದ್ದಿಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಮಳವಳ್ಳಿಯ ರೈತ ರಂಗಸ್ವಾಮಿ ಎಂಬವರು ತನ್ನ ಎರಡು ಎಕರೆಯಲ್ಲಿ ಬಾಳೆ ಕೃಷಿ ಮಾಡಿದ್ದು, ಬೆಳೆ ಫಲವತ್ತಾಗಿದೆ. ಆದರೆ ತೋಟಕ್ಕೆ ದೃಷ್ಟಿಯಾಗುತ್ತದೆ ಎನ್ನುವ ಕಾರಣಕ್ಕೆ ನಟಿಯರ ಫೋಟೋಗಳನ್ನು ತನ್ನ ತೋಟದಲ್ಲಿ ಕಟ್ಟಿ ಕುತೂಹಲ ಮೂಡಿಸಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಮಳವಳ್ಳಿ ಗ್ರಾಮದ ರಂಗನಾಥ ತೋಟದಲ್ಲಿ ನಟಿಯರ ಆಕರ್ಷಕ ಮೈಮಾಟ ನೋಡಿ ಸ್ಥಳೀಯ ಜನರು ನಗುತ್ತಿದ್ದು, ರೈರನ ಐಡಿಯಾವನ್ನು ನೋಡಲೆಂದೆ ಹಲವರು ತೋಟಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ತೋಟದ ಸುತ್ತ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ಹಾಕಲಾಗಿದೆ. ಮಲೆನಾಡು ಭಾಗದಲ್ಲಿ ಸಾಮಾನ್ಯವಾಗಿ ತೋಟಗಳೆದುರು ದೇವರ ಫೋಟೋಗಳನ್ನು ಹಾಕಿರುತ್ತಾರೆ. ಇಲ್ಲವೇ ಬೇಲಿಗಳ ಪಕ್ಕದಲ್ಲಿ ಬೆದರು ಗೊಂಬೆ ಹಾಗೂ ದೃಷ್ಟಿ ಗೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ರಂಗಸ್ವಾಮಿ ಬೆಳೆ ಸಂರಕ್ಷಣೆಗೆ ವಿಭಿನ್ನ ಐಡಿಯಾ ಮಾಡಿರುವುದು ಗಮನ ಸೆಳೆಯುತ್ತಿದೆ. ರಂಗನಾಥ್ ಮಾತನಾಡಿ, “ಹಲವು ಬಾರಿ ದೃಷ್ಟಿಗೊಂಬೆಗಳನ್ನಿಟ್ಟಿದ್ದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನಟಿಯರ ಫೋಟೋಗಳನ್ನು ದೃಷ್ಟಿ ಗೊಂಬೆಗಳ ಜಾಗದಲ್ಲಿ ಹಾಕಿದ್ದೀನಿ. ಈ ಫೋಟೋಗಳನ್ನು ಜನ ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ. ಕೆಲವರು ರಾತ್ರಿ ವೇಳೆಯೂ ಈ ಫೋಟೋಗಳನ್ನು ನೋಡಲು ಇಲ್ಲಿಗೆ ಬರುತ್ತಾರೆ” ಎಂದಿದ್ದಾರೆ.