ನ್ಯೂಸ್ ನಾಟೌಟ್: ನಾಳೆ (ನ.1) ಕನ್ನಡ ರಾಜ್ಯೋತ್ಸವದ ದಿನ ಮಹರಾಷ್ಟ್ರದಲ್ಲಿ ಮತ್ತು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಗಲಾಟೆ ನಡೆಸಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಬಂದಿದೆ. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿಗಾಗಿ ಆಗ್ರಹಿಸಿ ಮರಾಠಾ ಸಮುದಾಯದ ಸದಸ್ಯರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಕರ್ನಾಟಕದ ಬಸ್ಗಳನ್ನು ಪುಂಡರು ಗುರಿಯಾಗಿಸಿ ದಾಳಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಬಿಸಿ ವರ್ಗದಲ್ಲಿ ತಮಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರವೂ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಜತ್ತ ಎಂಬಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಸ್ನ ಮುಂಬದಿಯ ಗಾಜು ಹಾಗೂ ಕಿಟಕಿ ಗಾಜುಗಳನ್ನು ಪುಡಿ ಮಾಡಲಾಗಿದೆ. ಸೋಮವಾರ ರಾತ್ರಿ ಒಸ್ಮನಾಬಾದ್ ಜಿಲ್ಲೆಯ ತುರೋರಿ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ ಹಚ್ಚಲಾಗಿತ್ತು.
ಆಗ ಬಸ್ನಲ್ಲಿ 48 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದರು. ಮಂಗಳವಾರ ಮಧ್ಯಾಹ್ನ ಮುಂಬಯಿ- ಬೆಂಗಳೂರು ಹೆದ್ದಾರಿಯನ್ನು ಪ್ರತಿಭಟನಾಕಾರರು ಎರಡು ಗಂಟೆಗಳ ಕಾಲ ಬ್ಲಾಕ್ ಮಾಡಿದ್ದರು. ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಹೆದ್ದಾರಿಯಿಂದ ಪಕ್ಕಕ್ಕೆ ಸರಿಯಲು ಗುಂಪು ನಿರಾಕರಿಸಿದ್ದರಿಂದ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಸ್ಥಿತಿ ಎದುರಾಗಿತ್ತು.
ಮರಾಠಾ ಕ್ರಾಂತಿ ಮೋರ್ಚಾ ಸಂಘಟನೆಯ ಸದಸ್ಯರು ಸೊಲಾಪುರದಲ್ಲಿ ರೈಲ್ವೆ ಹಳಿಗಳಿಗೆ ತಡೆಯೊಡ್ಡಿದರು. ರೈಲ್ವೆ ಹಳಿಗಳ ಮೇಲೆ ಟೈರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕೇಸರಿ ಬಾವುಟಗಳನ್ನು ಹಿಡಿದ ಮರಾಠಾ ಸಮುದಾಯದ ಮೀಸಲಾತಿಗೆ ಆಗ್ರಹಿಸಿದರು. ಈ ಸಂಬಂಧ ರೈಲ್ವೆ ಅಧಿಕಾರಿಗಳು ಹಾಗೂ ಸೊಲಾಪುರ ನಗರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದರು. ಪ್ರತಿಭಟನೆ ಮುಂದುವರಿದರೂ, ಹಳಿಗಳ ಮೇಲಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸುವಲ್ಲಿ ಸಫಲರಾದರು.
ಜಲ್ನಾ ಜಿಲ್ಲೆಯಲ್ಲಿ ಉದ್ರಿಕ್ತ ಜನರ ಗುಂಪು ಪ್ರತಿಭಟನೆ ವೇಳೆ ಪಂಚಾಯತ್ ಸಮಿತಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಸೋಮವಾರ ರಾತ್ರಿ ಘನ್ಸವಾಂಗಿ ಎಂಬಲ್ಲಿ ‘ಏಕ್ ಮರಾಠಾ ಲಾಖ್ ಮರಾಠಾ’ ಎಂಬ ಘೋಷಣೆ ಕೂಗುತ್ತಾ ಪಂಚಾಯತಿ ಸಮಿತಿ ಕಚೇರಿಗೆ ಬಂದ ಜನರು, ಬೆಂಕಿ ಹಚ್ಚಿ ಕಟ್ಟಡವನ್ನು ಧ್ವಂಸಗೊಳಿಸಿದರು. ಕಟ್ಟಡದಲ್ಲಿನ ಕೆಲವು ಮಹತ್ವದ ದಾಖಲೆಗಳು ಹಾಗೂ ಪೀಠೋಪಕರಣಗಳು ಹಾನಿಗೊಳಗಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.