ನ್ಯೂಸ್ ನಾಟೌಟ್: ಮಂಗಳೂರಿನ ಕದ್ರಿ ಮಂಜುನಾಥ ದೇವಾಸ್ಥಾನವನ್ನು ಸ್ಫೋಟಿಸಲು ಸಂಚು ರೂಪಿಸಿದ್ದ ಕುಕ್ಕರ್ ಬಾಂಬ್ ಮಾಸ್ಟರ್ ಮೈಂಡ್ ಉಗ್ರನನ್ನು NIA (ರಾಷ್ಟ್ರೀಯ ತನಿಖಾ ದಳ) ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ಶಿವಮೊಗ್ಗ ಮೂಲದ ಉಗ್ರ ಅರಾಫತ್ ಆಲಿ ಎಂದು ಗುರುತಿಸಲಾಗಿದೆ.
ಈತ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ. ಭಾರತದಲ್ಲಿ ಹಿಂಸಾತ್ಮಕ ಕೃತ್ಯವನ್ನು ಎಸಗಿಸಲು ಸಂಚು ರೂಪಿಸಿದ್ದ. ಈ ಹಿಂದೆ ಕದ್ರಿ ಮಂಜುನಾಥ ದೇವಸ್ಥಾನವನ್ನು ಸ್ಫೋಟಿಸಲು ಶಾರಿಖ್ ಹೆಸರಿನ ಉಗ್ರ ಆಟೋದಲ್ಲಿ ತೆರಳುತ್ತಿದ್ದಾಗ ಕುಕ್ಕರ್ ಬಾಂಬ್ ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಸ್ಫೋಟಗೊಂಡಿತ್ತು. ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಈತನಾಗಿದ್ದು ಈತನ ಬಂಧನಕ್ಕೆ NIA ಬಲೆ ಬೀಸಿತ್ತು. ಈತ ಕೀನ್ಯಾದ ನೈರೋಬಿಯಿಂದ ನವದೆಹಲಿಗೆ ಬರುವ ವಿಚಾರದ ಖಚಿತ ಮಾಹಿತಿ ಪಡೆದ NIA ಅಧಿಕಾರಿಗಳು ದೇಶದ ರಾಜಧಾನಿ ನವದೆಹಲಿಯಲ್ಲಿ ಬಲೆಗೆ ಬೀಳಿಸಿದ್ದಾರೆ.
ಬಂಧಿತ ಉಗ್ರ ಶಾರಿಖ್ ಸೇರಿದಂತೆ ಹಲವು ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದ. ಅವರಿಗೆ ಹೇಗೆ ಪ್ಲಾನ್ ಮಾಡಬೇಕು ಮತ್ತು ಕಾರ್ಯಾಚರಣೆ ನಡೆಸಬೇಕು ಸೂಚಿಸುತ್ತಿದ್ದ ಎಂದು ತಿಳಿದು ಬಂದಿದೆ. ‘ಸಂಘಿಗಳನ್ನು ಹಾಗೂ ಮನುವಾದಿಗಳನ್ನು ಹತ್ತಿಕ್ಕಲು ಲಷ್ಕರ್ ಹಾಗೂ ತಾಲಿಬಾನ್ ಕರೆಸುವಂತೆ ನಮಗೆ ಒತ್ತಡ ತರಬೇಡಿ, ಲಷ್ಕರ್ ಜಿಂದಾಬಾದ್’ ಎಂದು ೨೦೨೦ರಲ್ಲಿ ಗೋಡೆ ಬರಹದ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಇದರಲ್ಲೂ ಅರಾಫತ್ ಆಲಿ ಪಾಲ್ಗೊಂಡಿದ್ದ ಎಂದು ತಿಳಿದು ಬಂದಿದೆ.