ನ್ಯೂಸ್ ನಾಟೌಟ್: ವೈದ್ಯ ವೃತ್ತಿ ಅತ್ಯಂತ ಮಹತ್ವದ್ದು, ನಾವು ಮಾಡುವ ಕೆಲಸದಿಂದ ಗುರುತಿಸುವಂತಾಗಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಮತ್ತು ಸಮಯ ಪರಿಪಾಲನೆ ಅತ್ಯಂತ ಮುಖ್ಯವಾದುದು ಎಂದು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಹೇಳಿದರು.
ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಶನಿವಾರ ಆಯೋಜಿಸಿದ ರಾಷ್ಟ್ರೀಯ ವೈದ್ಯರ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ತುಂಬಾ ಕಷ್ಟಕರವಾಗಿತ್ತು. ಆದರೆ ಈಗ ಆಧುನಿಕ ವಿಧಾನದಿಂದ ಸಾಕಷ್ಟು ಅಭಿವೃದ್ಧಿಯಾಗಿದೆ. ತ್ವರಿತವಾಗಿ ಆರೋಗ್ಯ ಸೇವೆ ನೀಡಲು ಸುಲಭವಾಗುತ್ತದೆ. ಪ್ರತಿಯೊಬ್ಬ ವೈದ್ಯನು ರೋಗಿಯ ಭಾವನೆಗಳನ್ನು ಅರಿತುಕೊಳ್ಳಬೇಕು. ಆಗ ರೋಗಿಯನ್ನು ಉಪಚರಿಸಲು ಸುಲಭವಾಗುತ್ತದೆ ಎಂದರು.
ಭಾರತ ರತ್ನ ಪ್ರಶಸ್ತಿ ವಿಜೇತ ಡಾ.ಬಿ.ಸಿ. ರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಷ್ಟ್ರೀಯ ವೈದ್ಯರ ದಿನದ ಮಹತ್ವವನ್ನು ವಿವರಿಸಲಾಯಿತು. ದೇಶಾದ್ಯಂತ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿ.ಸಿ. ರಾಯ್ ಅವರ ಜನ್ಮದಿನವನ್ನು (ಜುಲೈ 1 ) ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಖ್ಯಾತ ವೈದ್ಯರಾಗಿದ್ದ ಬಿ.ಸಿ. ರಾಯ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳು ಡಾ. ಬಿ.ಸಿ. ರಾಯ್ ಅವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಡಾ.ಕೆ.ವಿ. ಚಿದಾನಂದ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮೀಣ ಜನತೆಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂಬುವುದು ತಂದೆಯವರ ಕನಸಾಗಿತ್ತು. ಸಮರ್ಪಕವಾದ ರಸ್ತೆ, ಸಂಪರ್ಕ ಸೇತುವೆಗಳಿರಲಿಲ್ಲ. ಆದರೂ ಹಳ್ಳಿಗಳಲ್ಲಿ ಐದಾರು ಕಿ.ಮೀ. ದೂರ ನಡೆದುಕೊಂಡು ಹೋಗಿ ಚಿಕಿತ್ಸೆ ನೀಡಬೇಕಿತ್ತು. ಚಿಕಿತ್ಸೆ ಪಡೆದು ಗುಣಮುಖರಾದವರು ಈಗಲೂ ನಮ್ಮನ್ನು ಗುರುತಿಸಿ ನೆನಪಿಸಿಕೊಳ್ಳುತ್ತಾರೆ ಎಂದು ಡಾ.ಕೆ.ವಿ. ಚಿದಾನಂದ ಅವರು ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಸ್ವಾಗತಿಸಿದರು. ಬಯೋಕೆಮಿಸ್ಟ್ರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಶೃತಿ ರೈ ಪಿ. ರಾಷ್ಟ್ರೀಯ ವೈದ್ಯ ದಿನದ ಮಹತ್ವದ ಬಗ್ಗೆ ಮಾತನಾಡಿದರು. ರೆಸ್ಪಿರಾಟರಿ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರೀತಿರಾಜ್ ಬಳ್ಳಾಲ್ ವಂದಿಸಿದರು. ವೈದ್ಯಕೀಯ ವಿದ್ಯಾರ್ಥಿನಿ ಮಾಳವಿಕಾ ಪ್ರಾರ್ಥಿಸಿದರು. ವೈದ್ಯಕೀಯ ವಿದ್ಯಾರ್ಥಿಗಳಾದ ಲೇಖನ್ ಎನ್. ಮತ್ತು ಜಾಸ್ಮಿನ್ ಕಾರ್ಯಕ್ರಮ ನಿರೂಪಿಸಿದರು.