ನ್ಯೂಸ್ ನಾಟೌಟ್: ಕ್ಯಾನ್ಸರ್ ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತಿರುವ ಮಾರಕ ಕಾಯಿಲೆ. ವೈದ್ಯಕೀಯ ಕ್ಷೇತ್ರಕ್ಕೆ ಈ ಕಾಯಿಲೆ ದೊಡ್ಡ ಸವಾಲಾಗಿದೆ. ಮೊದ ಮೊದಲು ನಗರಕ್ಕೆ ಸೀಮಿತವಾಗಿದ್ದ ಕ್ಯಾನ್ಸರ್ ರೋಗ ಈಗ ಗ್ರಾಮೀಣ ಭಾಗದಲ್ಲೂ ಜನರ ಜೀವವನ್ನು ಕಸಿದುಕೊಳ್ಳುತ್ತಿದೆ. ದುಬಾರಿ ವೆಚ್ಚದ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗದೆ ಜನ ಒದ್ದಾಟ ನಡೆಸುತ್ತಿದ್ದಾರೆ. ಇಂತಹ ಸಮಸ್ಯೆಯನ್ನು ನೀಗಿಸುವುದಕ್ಕಾಗಿ ಸುಳ್ಯದಲ್ಲಿಯೇ 50 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸುವ ಮಹಾತ್ವಾಕಾಂಕ್ಷೆ ಯೋಜನೆಗೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಮುಂದಾಗಿದೆ. ಸುಳ್ಯದ ಪರಿವಾರಕಾನದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಗೆ ಸೇರಿದ ಜಮೀನಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ನಿರ್ಧರಿಸಲಾಗಿದೆ. ಈ ಸಿಹಿ ಸುದ್ದಿಯನ್ನು ವೈದ್ಯರ ದಿನದಂದೇ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ ಕೆ.ವಿ ಚಿದಾನಂದ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ತಿಳಿಸಿದ್ದಾರೆ.
ದಿ. ಕುರುಂಜಿ ವೆಂಕಟರಮಣ ಗೌಡರ ಕನಸು ನನಸು:
ಸುಳ್ಯ ತಾಲೂಕು ಹಿಂದುಳಿದ ಪ್ರದೇಶ. ಇಂತಹ ಕ್ಷೇತ್ರದಲ್ಲಿ ಶೈಕ್ಷಣಿಕ ಅಮೃತವನ್ನು ಉಣಬಡಿಸಿದ್ದು ದಿವಂಗತ ಕುರುಂಜಿ ವೆಂಕಟರಮಣ ಗೌಡರು. 1967ರಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸಂಸ್ಥೆಯನ್ನು ಸ್ಥಾಪಿಸಿದರು. ಸುಳ್ಯ ಸೇರಿದಂತೆ ಹತ್ತೂರಿನ ಜನರಿಗೆ ಉನ್ನತ ಮಟ್ಟದ ಶಿಕ್ಷಣವನ್ನು ಧಾರೆ ಎರೆದರು. ವೈದ್ಯಕೀಯ, ತಾಂತ್ರಿಕ ಶಿಕ್ಷಣ ನೀಡುವುದರ ಜೊತೆಗೆ ಊರಿಗೊಂದು ಉತ್ತಮ ಆಸ್ಪತ್ರೆಯನ್ನೂ ನೀಡಿದರು. ಆ ನಂತರ ಅವರಿಗೆ ಸುಳ್ಯದಲ್ಲೊಂದು ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಿ ಜನರಿಗೆ ಸ್ಥಳೀಯ ಮಟ್ಟದಲ್ಲಿಯೇ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಬೇಕು ಅನ್ನುವ ಕನಸಿತ್ತು. ಈ ಕನಸನ್ನು ಇದೀಗ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಆಡಳಿತ ಮಂಡಳಿ ನನಸು ಮಾಡಿರುವುದು ವಿಶೇಷ.
ಕ್ಯಾನ್ಸರ್ಗೆ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇದನ್ನು ಬಡವರಿಗೆ ಪೂರೈಸುವುದು ಕಷ್ಟವಾಗುತ್ತದೆ. ಜನರಿಗೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆಗೆ ಈಗ ಸುಳ್ಯದ ಪರಿವಾರಕಾನದಲ್ಲಿ 12.5 ಎಕರೆ ಜಮೀನಿನನ್ನು ನಿಗದಿಪಡಿಸಲಾಗಿದೆ. ಇದರ ರೂಪುರೇಷೆಗಳು ಅಂತಿಮಗೊಂಡಿದೆ. ಶೀಘ್ರದಲ್ಲಿಯೇ ಜನರಿಗೆ ಸೌಲಭ್ಯಗಳನ್ನು ಒದಗಿಸಲು ಈ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.