ನ್ಯೂಸ್ ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಮುಗಿದಿದೆ. ರಾಜ್ಯದಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ.
ಹೌದು, ಎಲ್ಲ ಕ್ಷೇತ್ರಗಳಲ್ಲಿ ಒಂದೊಂದು ವಿಶೇಷತೆ. ಕೆಲವರು ಭಾರೀ ಅಂತರದಿಂದ ಗೆದ್ದರು. ಇನ್ನೂ ಕೆಲವರು ಅಲ್ಪ ಪ್ರಮಾಣದಲ್ಲಿ ಗೆದ್ದರು. ಮತ್ತೂ ಕೆಲವರು ರೋಚಕ ಹೋರಾಟದಲ್ಲಿ ಸೋಲುಂಡರು. ಈ ರೋಚಕ ಹೋರಾಟದಲ್ಲಿ ಸೋತವರಲ್ಲಿ ಪುತ್ತಿಲ ಕೂಡ ಒಬ್ಬರು. ಪುತ್ತೂರಿನ ಮಟ್ಟಿಗೆ ಇದ್ದದ್ದು ಪ್ರಶ್ನೆಯಲ್ಲ. ಅಲ್ಲಿ ಇದ್ದದ್ದು ಹಿಂದುತ್ವ. ನಮ್ಮ ನಾಯಕ ಗೆಲ್ಲಬೇಕು, ಬಿಜೆಪಿಗೆ ಪಾಠ ಕಲಿಸಬೇಕು ಅನ್ನುವ ಹಠ.
ಪುತ್ತಿಲಗೆ ಸೀಟು ಸಿಗದೆ ಅವರು ಬಿಜೆಪಿಗೆ ಸೆಡ್ಡು ಹೊಡೆದರು. ಪಕ್ಷೇತರರಾಗಿ ಯುದ್ಧ ಗೆಲ್ಲುಲು ಪುತ್ತಿಲ ಟೊಂಕಕಟ್ಟಿ ನಿಂತಿದ್ರು. ಜನರ ಬೆಂಬಲ ಪ್ರೀತಿ ಅಭಿಮಾನ ಕೂಡ ಪುತ್ತಿಲಗೆ ಸಿಕ್ಕಿತು. ಜನಾಶೀರ್ವಾದಿಂದ ಪುತ್ತಿಲ ಮೆರವಣಿಗೆಯೂ ಅದ್ಧೂರಿಯಾಗಿ ನಡೆದಿತ್ತು. ಪುತ್ತಿಲ ತಾಕತ್ತು ಎಲ್ಲರಿಗೂ ತಿಳಿದದ್ದೇ ಆಗ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು. ಪುತ್ತಿಲ ಪರ ಬ್ಯಾಟ್ ಬೀಸಿದ್ದರು. ಫಲಿತಾಂಶದ ದಿನವೂ ಅಷ್ಟೇ, ಪುತ್ತಿಲ ಆರಂಭದಿಂದಲೂ ಮುನ್ನಡೆಯನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹಾಗೂ ಪುತ್ತಿಲ ನಡುವಿನ ರೋಚಕ ಸೆಣಸಿನಲ್ಲಿ ಬಿಜೆಪಿ ಅಭ್ಯರ್ಥಿ ಕಳೆದೇಹೋದ್ರು. ಕೊನೆ ಹಂತದವರೆಗೂ ಪುತ್ತಿಲ ಹಾಗೂ ಅಶೋಕ್ ರೈ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಯಲ್ಲಿ ರೈಗಳು ಗೆಲುವಿನ ನಗೆ ಬೀರಿದರು. ಅಲ್ಪ ಮತದ ಅಂತರದಿಂದ ಸೋತ ಪುತ್ತಿಲ ಸೋಲಿನಲ್ಲೂ ಜಯ ಕಂಡರು. ಅವರಿಗೆ ಜನ ಹಾಕಿದ ೬೦,೦೦೦ಸಾವಿರಕ್ಕೂ ಅಧಿಕ ಮತಗಳೇ ಸಾಕ್ಷಿ. ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ 66607 ಮತಗಳನ್ನು ಪಡೆದುಕೊಂಡ್ರೆ ಅರುಣ್ ಕುಮಾರ್ ಪುತ್ತಿಲ 62458 ಮತಗಳನ್ನು ಬಾಚಿಕೊಂಡ್ರು. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಕೇವಲ 37558 ಮತಗಳನ್ನು ಪಡೆದರು.
ಬಿಜೆಪಿ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದೆ ಅಂತ ಹೇಳಬಹುದು. ಟಿಕೇಟ್ ವಿಚಾರದ ಗೊಂದಲ, ವಿವಾದವೇ ಬಿಜೆಪಿಗೆ ಮುಳುವಾಯಿತು. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗೆಹರಿಸಿದ್ದರೆ ಬಹುಶಃ ಪುತ್ತೂರಿನ ಸೋಲು ತಪ್ಪುತ್ತಿತ್ತು. ಆದರೆ ಇಲ್ಲಿ ಯಾರೇ ಇದ್ದರೂ ಗೆಲ್ಲೋದು ಬಿಜೆಪಿಯೇ ಅನ್ನುವ ಲೆಕ್ಕಾಚಾರ ಉಲ್ಟಾ ಹೊಡೆಯಿತು. ನಾನು..ನಾನು ಅನ್ನುವವನಿಗೆ ಮತದಾರ ಸರಿಯಾಗಿಯೇ ಹೊಡೆತ ನೀಡಿದ. ಇಲ್ಲಿ ಬಿಜೆಪಿಗೆ ತನ್ನ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು. ಸೋಲೇ ಇಲ್ಲ ಅನ್ನುತ್ತಿದ್ದವರಿಗೆ ಪುತ್ತಿಲ ನಿಂತಿದ್ದರಿಂದ ಭಾರೀ ಹಿನ್ನಡೆಯಾಯಿತು. ವೋಟ್ಗಳು ವಿಭಜಿಸಲ್ಪಟ್ಟವು. ಬಿಜೆಪಿಗೆ ಬರಬೇಕಿದ್ದ ಸಾವಿರಾರು ವೋಟ್ಗಳು ಪುತ್ತಿಲ ಪಾಲಾಯಿತು. ಇದರಿಂದ ಅಶೋಕ್ ರೈ ಅವರಿಗೆ ಅದೃಷ್ಟ ಒಲಿದು ಬಂತು. ಗೆಲುವಿನ ದಾರಿ ಸುಲಭವಾಯಿತು.