ನ್ಯೂಸ್ ನಾಟೌಟ್: ಭರಪೂರ ಭರವಸೆಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಇದೀಗ ಭರವಸೆಗಳನ್ನು ತಕ್ಷಣ ಜಾರಿಗೊಳಿಸದೆ ಪೇಚಿಗೆ ಸಿಲುಕಿದೆ. ಚುನಾವಣೆ ವೇಳೆ ನೀಡಿದ್ದ ಉಚಿತ ಭರವಸೆಗಳು ಈಗ ಕಾಂಗ್ರೆಸ್ ಶಾಸಕರಿಗೆ ಮಗ್ಗುಲ ಮುಳ್ಳಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಐದೂ ಭರವಸೆಗಳನ್ನು ಜಾರಿಗೊಳಿಸುತ್ತೇವೆ ಎಂದು ಚುನಾವಣಾ ಪೂರ್ವ ನೀಡಿದ ಹೇಳಿಕೆಗಳನ್ನು ಸರ್ಕಾರ ಮರೆತಂತಿದೆ.
ಇದೀಗ ಜನರೆ ಸಾಮೂಹಿಕವಾಗಿ ಡಂಗುರ ಸಾರುವ ಮೂಲಕ ಕೈ ಸರ್ಕಾರದ ಉಚಿತ ಯೋಜನೆ ಸ್ವಯಂ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ದಾವಣಗೆರೆ ತಾಲೂಕಿನ ಗೋಣಿವಾಡದಲ್ಲಿ ತಮಟೆ ಬಾರಿಸಿ, ಕರೆಂಟ್ ಬಿಲ್ ಕಟ್ಟದಂತೆ ಡಂಗುರ ಸಾರಲಾಗಿದೆ. ಈ ಮೂಲಕ ಜನರಿಗೆ ವಿದ್ಯುತ್ ಬಿಲ್ ಕಟ್ಟದಂತೆ ಜಾಗೃತಿ ಮೂಡಿಸಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಉಚಿತ ವಿದ್ಯುತ್ ನೀಡುವಂತೆ ಹೇಳಿದ್ದಾರೆ. ಹೀಗಾಗಿ ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟದಿರಲು ನಿರ್ಧಾರ ಮಾಡಿದ್ದಾರೆ ಎಂದು ಡಂಗುರ ಸಾರಲಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರೆಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿ ಇದುವರೆಗೂ ಜಾರಿ ಮಾಡಿಲ್ಲ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಮಹಿಳೆಯರು ಟಿಕೆಟ್ ಪಡೆಯದೆ ಪ್ರಯಾಣಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಈಗಾಗಲೇ ಕರೆ ಕೊಟ್ಟಿದ್ದಾರೆ.
ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ. ಹೆಚ್ಚುವರಿಯಾಗಿ ಬಳಸಿದ್ದರೆ ಮಾತ್ರ ಬಿಲ್ ಕಟ್ಟಿ, ಗ್ಯಾರಂಟಿ ಕಾರ್ಡ್ನಲ್ಲಿ ಕಾಂಗ್ರೆಸ್ನವರು ಎಲ್ಲಿಯೂ ಷರತ್ತುಗಳು ಅನ್ವಯ ಅಂತ ನಮೂದಿಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿರುವುದು ಜನರಿಗೆ ಬೆಂಬಲ ನೀಡಿದಂತಾಗಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಯಿಂದಾಗಿ ಅಧಿಕಾರಿಗಳು ಸಾರ್ವಜನಿಕರಿಂದ ಏಟು ತಿನ್ನುವಂತಾಗಿದೆ. ದಿನಕ್ಕೊಂದು ಕಡೆ ಹೊಡೆದಾಟ ಬಡಿದಾಟ ಆರಂಭವಾಗಿದೆ. ವಿದ್ಯುತ್ ಬಿಲ್ ನೀಡುವುದಿಲ್ಲ ಎಂದು ಬಿಲ್ ಸಂಗ್ರಹಕ್ಕೆ ಬಂದ ಇಲಾಖೆ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆಗಳೂ ನಡೆದಿವೆ. ಅದೇ ರೀತಿ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕಾಗಿ ನಿರ್ವಾಹಕರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದು ನಡೆದಿದೆ. ಈ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಸ್ಪಷ್ಟ ಸೂಚನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.