ನ್ಯೂಸ್ ನಾಟೌಟ್: ಸಂಪಾಜೆ ಸುತ್ತಮುತ್ತಲಿನ ಊರಿನಲ್ಲಿ ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅಡುಗೆ ಪಾಕದ ನಿಪುಣರಾಗಿ ಕೆಲಸ ಮಾಡುತ್ತಿದ್ದ ಚಿನ್ನಪ್ಪ ಮಂಡೆಕೋಲು ಹೃದಯಾಘಾತದಿಂದ ಇದೀಗ ನಿಧನರಾಗಿದ್ದಾರೆ. ಅವರಿಗೆ ೫೫ ವರ್ಷ ಆಗಿತ್ತೆಂದು ತಿಳಿದು ಬಂದಿದೆ. ಮೃತರು ಪತ್ನಿ ನೇತ್ರಾವತಿ, ಇಬ್ಬರು ಪುತ್ರರಾದ ಯಶವಂತ್, ದೀಕ್ಷಿತ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಚಿನ್ನಪ್ಪ ಅವರು ಸಂಪಾಜೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಡುಗೆ ಚಿನ್ನಪ್ಪಣ್ಣ ಎಂದೇ ಖ್ಯಾತಿ ಪಡೆದಿದ್ದರು. ಯಾವುದೆ ಮದುವೆ, ತಿಥಿ, ಗೃಹ ಪ್ರವೇಶ ಏನೇ ಸಮಾರಂಭವಿದ್ದರೂ ಚಿನ್ನಪ್ಪಣ್ಣನ ಪಾಕವಿಲ್ಲದೆ ಪೂರ್ಣವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಪಾಕ ಪ್ರವೀಣರಾಗಿ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೀಗಾಗಿ ಅವರಿಗೆ ಬೇಡಿಕೆ ಕೂಡ ಹೆಚ್ಚಿತ್ತು. ಜನವರಿ, ಫ್ರೆಬ್ರವರಿ , ಮಾರ್ಚ್ ತಿಂಗಳಲ್ಲಿ ಅವರಿಗೆ ಬಿಡುವಿಲ್ಲದ ಕೆಲಸ. ಸಂಪಾಜೆಯ ಕಲ್ಲುಗುಂಡಿ ಎಂಬಲ್ಲಿ ಹುಡುಗನ ಮನೆಗೆ ಹುಡುಗಿಯ ಮನೆ ಕಡೆಯವರು ಇಂದು (ಗುರುವಾರ) ಬರುವ ಕಾರ್ಯಕ್ರಮವಿತ್ತು. ಹೀಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅಂತಿಮ ಹಂತದ ಅಡುಗೆ ತಯಾರಿಯಲ್ಲಿದ್ದಾಗ ಚಿನ್ನಪ್ಪಣ್ಣ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಸಂಪಾಜೆಯ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಚಿನ್ನಪ್ಪಣ್ಣ ಅವರು ಸನ್ಮಾನ ಪಡೆಯಬೇಕಿತ್ತು. ಆದರೆ ವಿಧಿಯಾಟಕ್ಕೆ ಚಿನ್ನಪ್ಪ ಅವರು ಬಲಿಯಾಗಿದ್ದಾರೆ.