ರಾಜ್ಯ ಸರ್ಕಾರ ಒಟ್ಟು 2,000 ಹೊಸ ಬಸ್ ಗಳ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಸರ್ಕಾರದಿಂದಲೇ ಸೂಕ್ತ ಅನುದಾನಕ್ಕೆ ಒಪ್ಪಿಗೆ ದೊರೆತಿದೆ. ಬಸ್ ಗಳಲ್ಲಿ ಉಚಿತ ಪ್ರಯಾಣಿಕರ ಸಂಖ್ಯೆ ಲಕ್ಷಗಳಿಂದ ಕೋಟಿಗೆ ದಾಟಿದೆ ಎಂದು ಸಾರಿಗೆ ಇಲಾಖೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ದಿನನಿತ್ಯ ಪ್ರಯಾಣಿಸುವವರ ಸಂಖ್ಯೆ ಏರಿಕೆಯಾಗುತ್ತಲೇ ಬಂದಿದೆ. ಈವರೆಗೆ ಸ್ಥಗಿತಗೊಂಡಿದ್ದ ನೇಮಕಾತಿ ಕಾರಣದಿಂದ ಸಾರಿಗೆ ಸಂಸ್ಥೆಗಳು ತತ್ತರಿಸಿ ಹೋಗಿದ್ದವು. ಈ ವೇಳೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆ ಅನುಷ್ಠಾನ ಸುಲಭವಾಗಿರಲಿಲ್ಲ. ಯೋಜನೆ ಅನುಷ್ಠಾನ ನಿಜಕ್ಕೂ ಸವಾಲಾಗಿತ್ತು. ಅದೆಲ್ಲವುಗಳನ್ನು ಮೆಟ್ಟಿ ನಿಂತು ಯೋಜನೆ ಜಾರಿ ಮಾಡಿದ್ದೇವೆ. ಜೊತೆಗೆ 2000 ಹೊಸ ಬಸ್ ಗಳ ಖರೀದಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 5,800 ಹೊಸ ಬಸ್ಸುಗಳ ಸೇರ್ಪಡೆ ಆಗಿದೆ. ಸಾರಿಗೆ ನಿಗಮಗಳಲ್ಲಿ 9000 ಹೊಸ ನೌಕರರ ನೇಮಕಾತಿಗೆ ಅನುಮತಿ ಪಡೆಯಲಾಗಿದೆ. ಈವರೆಗೆ 1000 ಅನುಕಂಪದ ಆಧಾರದ ನೇಮಕಾತಿ ನಡೆದಿವೆ. ಸರ್ಕಾರ ಬಂದಾಗ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿದ್ದ ಇದ್ದ ಸವಾಲು ಎದುರಿಸಿ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಿದ್ದೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕರ್ನಾಟಕ ಸಾರಿಗೆ ಸಂಸ್ಥೆಗಳು ರೂಪಾಯಿ 2000 ಕೋಟಿ ಸಾಲ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಇಲ್ಲಿ ವಿಶೇಷವೆಂದರೆ ಸದರಿ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದೆ. ಪ್ರಸಕ್ತ ಸಾಲಿನ 2025-26ರ ಬಜೆಟ್ ನಲ್ಲಿ ಸಹ ಸಾರಿಗೆ ಇಲಾಖೆಗೆ ಮಹತ್ವದ ಘೋಷಣೆ ಆಗಿವೆ.
ಇದನ್ನೂ ಓದಿ: ಮೃತ ತಂದೆಯ ದೇಹವನ್ನು ಆಸ್ಪತ್ರೆಯಿಂದ ಮನೆಗೆ ತರುವ ವೇಳೆ ಮಾರ್ಗ ಮಧ್ಯೆ ಮಗನೂ ಸಾವು..! ಇಲ್ಲಿದೆ ಮನಕಲಕುವ ಘಟನೆ..!