ನ್ಯೂಸ್ ನಾಟೌಟ್:ಪ್ರತಿವರ್ಷ ಏಪ್ರಿಲ್ 14 ರಂದು ಭಾರತ ದೇಶದಾದ್ಯಂತ ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ನಮ್ಮ ದೇಶದ ಸಂವಿಧಾನ ಶಿಲ್ಪಿ ಎಂದೇ ಖ್ಯಾತಿಯಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾಗಿದೆ. ವಿಶ್ವದರ್ಜೆಯ ವಕೀಲರು, ಸಮಾಜ ಸುಧಾಕರರೂ ಆಗಿದ್ದ ಅಂಬೇಡ್ಕರ್ ಅವರು ಭಾರತದ ದಲಿತ ಚಳವಳಿಗಳ ಹಿಂದಿನ ಮಹಾನ್ ಶಕ್ತಿ ಎಂದರೂ ತಪ್ಪಾಗಲಿಕ್ಕಿಲ್ಲ. ಶಿಕ್ಷಣ, ಸಮಾನತೆ, ಅರ್ಥಶಾಸ್ತ್ರಕ್ಕೆ ಇವರು ನೀಡಿದ ಕೊಡುಗೆಗಳು ಅಪಾರ. ಇವರ 134ನೇ ಜನ್ಮದಿನವನ್ನು ಗೋಳಿತೊಟ್ಟು ಪ್ರಾಥಮಿಕ ಶಾಲೆಯಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಾರಿಫ್, ಶತಮಾನೋತ್ಸವ ಸಮಿತಿಯ ಸದಸ್ಯ ನಾಸಿರ್ ಸಮರಗುಂಡಿ, ಸುಂದರ ಶೆಟ್ಟಿ ಪುರ, ಶೇಖರ ಗೌಡ ಅನಿಲಭಾಗ್ ಹಾಗೂ ಶಾಲಾ ಮುಖ್ಯಶಿಕ್ಷಕಿ ಜಯಂತಿ.ಬಿ.ಎಂ ಸೇರಿದಂತೆ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ವಿಧ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ಭಾವಗೀತೆಯನ್ನು ಹಾಡಿದರು.ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು. ಪ್ರಭಾವಿ ವ್ಯಕ್ತಿತ್ವವಿದ್ದ ಡಾ.ಅಂಬೇಡ್ಕರ್ ಅವರ ಸಮಾಜಮುಖಿ ಚಿಂತನೆ, ಶೋಷಿತ ವರ್ಗದ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಮತ್ತು ಭಾರತೀಯ ಸಂವಿಧಾನದ ಆಕಾರ ನೀಡಿದ ಮಹತ್ತರ ಪಾತ್ರದ ಬಗ್ಗೆ ಉಪನ್ಯಾಸ ನೀಡಲಾಯಿತು.