ನ್ಯೂಸ್ ನಾಟೌಟ್: ನಾನು ಚಿಪ್ಸ್ ಕದ್ದಿಲ್ಲಮ್ಮಾ ಎಂದು ಡೆತ್ ನೋಟ್ ಬರೆದಿಟ್ಟು 12 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
“ಚಿಪ್ಸ್ ಪ್ಯಾಕೇಟ್ ಕದ್ದ ಆರೋಪದ ಮೇಲೆ ನಾಲ್ಕು ಜನರ ಎದುರು ಅಂಗಡಿಯವ ಬೈದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಅವಮಾನಕ್ಕೊಳಗಾದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬರೆದ ಡೆತ್ ನೋಟ್ನಲ್ಲಿ ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ ಎಂದು ಹೇಳಿದ್ದಾನೆ. ಗುರುವಾರ ಸಂಜೆ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
7 ನೇ ತರಗತಿಯ ವಿದ್ಯಾರ್ಥಿ ಕೃಷ್ಣೇಂದು ದಾಸ್ ಎಂದು ಗುರುತಿಸಲಾದ ಬಾಲಕ ಚಿಪ್ಸ್ ಖರೀದಿಸಲು ಅಂಗಡಿಯೊಂದಕ್ಕೆ ಹೋಗಿದ್ದ ಎಂದು ವರದಿಯಾಗಿದೆ. ಆತನ ಕುಟುಂಬದ ಪ್ರಕಾರ, ಶುಭಂಕರ್ ದೀಕ್ಷಿತ್ ಎಂದು ಗುರುತಿಸಲಾದ ಅಂಗಡಿಯವನಿಗೆ ಪದೇ ಪದೇ ಕರೆದರೂ ಆತ ಉತ್ತರಿಸಿರಲಿಲ್ಲ, ಅಂಕಲ್ ನಾನು ಚಿಪ್ಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ, ಅಂಗಡಿಯವರು ಇಲ್ಲ ಎಂದುಕೊಂಡು ಬಾಲಕ ಆಮೇಲೆ ಹಣ ಕೊಟ್ಟರಾಯ್ತು ಎಂದು ಹೇಳಿ ಪ್ಯಾಕೆಟ್ ತೆಗೆದುಕೊಂಡಿದ್ದಾನೆ.
ಕೆಲವು ಕ್ಷಣಗಳ ಬಳಿಕ, ಅಂಗಡಿಯವನು ಹಿಂತಿರುಗಿ ಬಂದು,”ಬಾಲಕನ ಹಿಂದೆಯೇ ಬಂದು , ಕಪಾಳಮೋಕ್ಷ ಮಾಡಿ, ಬಸ್ಕಿ ಹೊಡೆಸಿದ್ದಾರೆ” ಎಂದು ಕುಟುಂಬ ದೂರಿನಲ್ಲಿ ತಿಳಿಸಿದ್ದಾರೆ. ಬಾಲಕನ ತಾಯಿಯನ್ನು ಸ್ಥಳಕ್ಕೆ ಕರೆಸಿ ಗದರಿಸಲಾಯಿತು ಎಂದು ಆರೋಪಿಸಲಾಗಿದೆ. ಮನೆಗೆ ಹಿಂತಿರುಗಿದ ಬಳಿಕ ಹುಡುಗ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ, ನಂತರ ಅವನು ಬಾಗಿಲು ತೆರೆಯಲೇ ಇಲ್ಲ, ಆತ ಪ್ರಜ್ಞಾಹೀನನಾಗಿ ಬಿದ್ದಿದ್ದ.
ಅರ್ಧ ಖಾಲಿಯಾದ ಕೀಟನಾಶಕ ಬಾಟಲಿಯು ಅವನ ಪಕ್ಕದಲ್ಲಿ ಬಿದ್ದಿದ್ದು, ಬಾಯಿಯಿಂದ ನೊರೆ ಬರುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟರೊಳಗಾಗಿ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.