ನ್ಯೂಸ್ ನಾಟೌಟ್: ಮಗನೊಬ್ಬ ಆಸ್ತಿಗಾಗಿ ತನ್ನ ಹೆತ್ತ ತಂದೆ-ತಾಯಿಯನ್ನೇ ಟ್ರ್ಯಾಕ್ಟರ್ ನಿಂದ ಬೆನ್ನಟ್ಟಿ, ಡಿಕ್ಕಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಆಂಧ್ರದ ವಿಜಯನಗರಂ ಜಿಲ್ಲೆಯ ಪುಸಪತಿರೇಗ ಮಂಡಲದಲ್ಲಿ ನಡೆದಿದೆ.
ಚಲ್ಲವನಿಪೇಟ ಪಂಚಾಯಿತಿಯ ನಡುಪುರಿ ಕಲ್ಲಾಲು ಗ್ರಾಮದ ಅಪ್ಪಲನಾಯ್ಡು (55) ಮತ್ತು ಜಯಾ (45) ದಂಪತಿಗೆ ರಾಜಶೇಖರ್ ಎಂಬ ಮಗ ಮತ್ತು ರಾಧಾ ಕುಮಾರಿ ಎಂಬ ಮಗಳಿದ್ದಾರೆ. ರಾಧಾ ಕುಮಾರಿ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದಾರೆ ಮದುವೆಯ ಸಮಯದಲ್ಲಿ, ಆಕೆಯ ಪಾಲಕರು ತಮ್ಮ ಒಂದು ಎಕರೆ ಭೂಮಿಯಲ್ಲಿ 20 ಸೆಂಟ್ಸ್ ಅನ್ನು ಆಕೆಗೆ ನೀಡಿದರು.
ಆದರೆ, ರಾಧಾ ಅವರ ಪತಿ ಅನಾರೋಗ್ಯದಿಂದ ಹಠಾತ್ತನೆ ನಿಧನರಾದರು. ಅಂದಿನಿಂದ ಅಪ್ಪಲನಾಯ್ಡು ಮತ್ತು ಜಯಾ, ತಮ್ಮ ಮಗಳು ರಾಧಾಗೆ ಬೆಂಬಲವಾಗಿ ನಿಂತರು. ಮಗ ರಾಜಶೇಖರ್ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ನೆಲ್ಲಿಮರ್ಲ ಮಂಡಲದ ವಲ್ಲಾಪುರದ ಯುವತಿಯನ್ನು ಆತ ವಿವಾಹವಾಗಿದ್ದ.
ಮದುವೆಯ ನಂತರ ರಾಜಶೇಖರ್, ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗಿದೆ. ಒಂದೆಡೆ, ಪತಿಯ ಮರಣದ ನಂತರ ತಮ್ಮ ಮೇಲೆ ಅವಲಂಬಿತರಾಗಿದ್ದ ಮಗಳ ಜೀವನ, ಮತ್ತೊಂದೆಡೆ, ಕೆಟ್ಟ ಅಭ್ಯಾಸಗಳಿಂದಾಗಿ ಸಾಲದಲ್ಲಿದ್ದ ತಮ್ಮ ಮಗನನ್ನು ನೋಡಿ ಅಪ್ಪಲನಾಯ್ಡು ದಂಪತಿ ಚಿಂತೆಗೀಡಾಗಿದ್ದರು.
ಅಪ್ಪಲನಾಯ್ಡು ತಮ್ಮ 80 ಸೆಂಟ್ಸ್ ಭೂಮಿಯಲ್ಲಿ 20 ಸೆಂಟ್ಸ್ ಅನ್ನು ರಾಧಾ ಅವರ ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ನೀಡಿದ್ದರು. ಬಳಿಕ ತಮ್ಮ ಮಗ ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಿದ್ದರಿಂದ, ಉಳಿದ ಭೂಮಿಯನ್ನು ಆತ ಯಾವುದೇ ಸಮಯದಲ್ಲಿ ಮಾರಾಟ ಮಾಡಬಹುದು ಎಂಬ ಚಿಂತೆಯಿಂದ ಅಪ್ಪಲನಾಯ್ಡು ದಂಪತಿ, ತಮ್ಮ ಮಗಳು ರಾಧಾ ಹೆಸರಿಗೆ ಇನ್ನೂ 30 ಸೆಂಟ್ಸ್ ಭೂಮಿಯನ್ನು ನೋಂದಾಯಿಸಿದರು.
ತಮ್ಮ 80 ಸೆಂಟ್ಸ್ ಭೂಮಿಯಲ್ಲಿ 50 ಸೆಂಟ್ಸ್ ಭೂಮಿಯನ್ನು ತಮ್ಮ ಮಗಳು ರಾಧಾಗೆ ನೀಡಿದ್ದನ್ನು ತಿಳಿದ ಮಗ ರಾಜಶೇಖರ್, ನೋಂದಾಯಿಸಿದ್ದ ಭೂಮಿಯನ್ನು ಹಿಂದಿರುಗಿಸುವಂತೆ ರಾಧಾ ಜೊತೆ ಆಗಾಗ ಜಗಳವಾಡುತ್ತಿದ್ದ. ಆದಾಗ್ಯೂ, ಅಪ್ಪಲನಾಯ್ಡು ಮಾತ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದೇ ಸಂದರ್ಭದಲ್ಲಿ, ಸಾಲದ ಹೊರೆಯನ್ನು ಹೊರಲು ಸಾಧ್ಯವಾಗದೆ, ತಂದೆ ಅಪ್ಪಲನಾಯ್ಡು ಬಳಿಯಿದ್ದ ಭೂಮಿಯನ್ನು ಮಾರಾಟ ಮಾಡಲು ರಾಜಶೇಖರ್ ನಿರ್ಧರಿಸಿದ. ಹೀಗಾಗಿ, ಜೆಸಿಬಿ ಮತ್ತು ಟ್ರ್ಯಾಕ್ಟರ್ ಸಹಾಯದಿಂದ ಜಮೀನಿನಲ್ಲಿ ಕೆಲಸ ಮಾಡಿ ಭೂಮಿಯನ್ನು ಸಮತಟ್ಟು ಮಾಡುತ್ತಿದ್ದ.
ಜಮೀನನ್ನು ಮಾರಾಟ ಮಾಡಲು ಜಮೀನಿನಲ್ಲಿ ಮಗ ಕೆಲಸ ಮಾಡುತ್ತಿದ್ದಾನೆ ಎಂಬುದು ಅಪ್ಪಲನಾಯ್ಡು ದಂಪತಿಗೆ ತಿಳಿದಾಗ, ಅವರು ಜಮೀನಿನ ಬಳಿಗೆ ಬಂದು ಮಗಳು ರಾಧಾಗೆ ನೀಡಿದ್ದ ಜಮೀನನ್ನು ಸಮತಟ್ಟು ಮಾಡದಂತೆ ತಡೆದಿದ್ದಾರೆ. ಈ ವೇಳೆ ರಾಜಶೇಖರ್ ತನ್ನ ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಹತ್ತಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಪೋಷಕರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆದರೆ, ರಾಜಶೇಖರ್ ಹಿಂದೆ ಸರಿಯದೇ, ಅವರನ್ನು ಚೇಸ್ ಮಾಡಿ, ಡಿಕ್ಕಿ ಹೊಡೆದು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇತರರು ಘಟನೆಯನ್ನು ನೋಡಿ ಭಯಭೀತರಾಗಿ ಓಡಿಹೋಗಿದ್ದಾರೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜಶೇಖರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.