ನ್ಯೂಸ್ ನಾಟೌಟ್:ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಕುರಿತಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಕ್ಷಣ ಕ್ಷಣಕ್ಕೂ ಈ ಘಟನೆಗೆ ಸಂಬಂಧ ಪಟ್ಟಂತೆ ಹಲವಾರು ಅಚ್ಚರಿದಾಯಕ ಅಂಶಗಳು ಬಹಿರಂಗಗೊಂಡಿವೆ. ತನಿಖಾ ಸಂಸ್ಥೆಗಳಿಗೆ ಯೋತ್ಪಾದಕರು ಪಹಲ್ಗಾಮ್ ಜೊತೆ ಇನ್ನೂ ಮೂರು ತಾಣಗಳನ್ನು ಟಾರ್ಗೆಟ್ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಏಪ್ರಿಲ್ 22 ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ನಡೆಸಿದ ಭಯೋತ್ಪಾದಕರು ಘಟನೆಗೆ ಎರಡು ದಿನಗಳ ಮೊದಲೇ ಬೈಸರನ್ ಕಣಿವೆಯಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ. ಜತೆಗೆ ಬೈಸರನ್ ವ್ಯಾಲಿಯಲ್ಲಿ ದಾಳಿಗೂ ಮುನ್ನ ಉಗ್ರರು ಪರಿಶೀಲನೆ ನಡೆಸಿದ್ದರು. ದಾಳಿಗೆ ಪಕ್ಕಾ ಪ್ಲ್ಯಾನ್ ಕೂಡ ಮಾಡಿದ್ದರು ಎಂಬ ವಿಚಾರವನ್ನು ದಾಳಿಗೆ ಸಂಬಂಧಿಸಿದಂತೆ ಬಂಧಿತನಾದ ಸ್ಥಳೀಯ ವ್ಯಕ್ತಿ ಬಾಯ್ಬಿಟ್ಟಿದ್ದಾನೆ. ಈತ ಉಗ್ರರಿಗೆ ಸಹಾಯ ಮಾಡಿದ್ದ ಎನ್ನಲಾಗಿದೆ.
ಕೇವಲ ಪಹಲ್ಗಾಮ್ ಮಾತ್ರವಲ್ಲ ಉಗ್ರರು ಪಹಲ್ಗಾಮ್ ಬೈಸರನ್ ವ್ಯಾಲಿ ಜೊತೆಗೆ ಅರು ವ್ಯಾಲಿ, ಸ್ಥಳೀಯ ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿಯನ್ನೂ ದಾಳಿಗೆ ಗುರಿಯಾಗಿಸಿದ್ದರು. ಪಹಲ್ಗಾಮ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಗಿ ಭದ್ರತೆ ಇತ್ತು. ಹೀಗಾಗಿ, ಕೊನೆಗೆ ಬೈಸರನ್ ವ್ಯಾಲಿಯಲ್ಲಿ ದಾಳಿ ನಡೆಸುವ ಪ್ಲ್ಯಾನ್ ಅನ್ನು ಉಗ್ರರು ಫೈನಲ್ ಮಾಡಿದ್ದರು. ನಾಲ್ವರು ಸ್ಥಳೀಯರಿಂದ ಉಗ್ರರಿಗೆ ಸಹಾಯ ಸಿಕ್ಕಿತ್ತು. ಲಾಜಿಸ್ಟಿಕ್ ವ್ಯವಸ್ಥೆ ಮಾಡಿಕೊಡಲಾಗಿತ್ತು.ಸ್ಥಳೀಯ 20 ಮಂದಿಯು ಉಗ್ರರಿಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಕೆಲವರನ್ನು ಬಂಧಿಸಿರುವ ಎನ್ಐಎ ಇನ್ನೂ ಕೆಲ ಶಂಕಿತರ ಮೇಲೆ ಕಣ್ಗಾವಲು ಇರಿಸಿದೆ. ದಾಳಿಗೂ ಮುನ್ನ ಈ ಏರಿಯಾದಲ್ಲಿ ಮೂರು ಸ್ಯಾಟಲೈಟ್ ಫೋನ್ಗಳ ಬಳಕೆಯಾಗಿವೆ. ಇದರಲ್ಲಿ 2 ಫೋನ್ಗಳ ಸಿಗ್ನಲ್ ಟ್ರೇಸ್ ಮಾಡುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.ಇದುವರೆಗೆ 2,500 ಜನರ ವಿಚಾರಣೆ ನಡೆಸಲಾಗಿದೆ. 186 ಮಂದಿಯನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ.ಇನ್ನೂ ತನಿಖೆಯನ್ನು ಮುಂದುವರಿಸಲಾಗಿದೆ.