ನ್ಯೂಸ್ ನಾಟೌಟ್: ಕಾಶ್ಮೀರದ ಪಹಲ್ಗಾಮ್ ಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ಇಸ್ಲಾಮಿಕ್ ಉಗ್ರರ ಗುಂಡೇಟಿಗೆ ಬಲಿಯಾದ ಕನ್ನಡಿಗರ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ರೂ. ನೆರವು ನೀಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.ಬೆಂಗಳೂರಿನ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಜೊತೆಗೆ, ಅವರ ಕುಟುಂಬಕ್ಕೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಭರತ್ ಭೂಷಣ್ ಅವರ ಕುಟುಂಬಕ್ಕೆ ಬೆಂಗಳೂರಿನ ಜನರಿಂದ ಸಂಗ್ರಹಿಸಲಾದ 10 ಲಕ್ಷ ರೂ. ಹಣ ನೆರವು ನೀಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದ ಮಂಜುನಾಥ್ ಅವರ ಮಗ ಪಿಯುಸಿ ಓದುತ್ತಿದ್ದಾನೆ. ಅವನ ವಿಧ್ಯಾಭ್ಯಾಸ ತಾಯಿ ನೋಡ್ಕೊಬೇಕು. ಇನ್ನು ಬೆಂಗಳೂರಿನ ಭರತ್ ಅವರಿಗೆ 3 ವರ್ಷದ ಮಗ ಇದ್ದಾನೆ. ಅವರಿಗೂ ಉತ್ತಮ ವಿದ್ಯಾಭ್ಯಾಸ ಮಾಡಿಸಬೇಕಿದೆ. ಆದರೆ, ರಾಜ್ಯ ಸರ್ಕಾರ ಅವರಿಗೆ ಕನಿಷ್ಟ 1 ಕೋಟಿ ರೂ. ಪರಿಹಾರ ನೀಡಬೇಕಿತ್ತು. ಆದರೆ, 10 ಲಕ್ಷ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ. ಆದರೆ, ಪಕ್ಕದ ರಾಜ್ಯದ ವ್ಯಕ್ತಿ ಕಾಡಾನೆ ತುಳಿದು ಸಾವನ್ನಪ್ಪಿದರೆ 15 ಲಕ್ಷ ರೂ. ಪರಿಹಾರ ಕೊಡಲು ಮುಂದಾಗಿದ್ದರು. ನಮ್ಮ ರಾಜ್ಯ ಸರ್ಕಾರ ಮುಸ್ಲಿಂ ಓಟಿಗೆ ಮಾರಿಕೊಂಡಿದೆ. ಇವರಿಂದ ಜಾಸ್ತಿ ಏನು ನಿರೀಕ್ಷೆ ಮಾಡೋಕೆ ಆಗಲ್ಲ ಎಂದು ಕಿಡಿಕಾರಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜನರು ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದು, ಒಟ್ಟಾರೆಯಾಗಿ 20 ಲಕ್ಷ ರೂ. ಹಣ ಸಂಗ್ರಹವಾಗಿದೆ. ಈ ಮೂಲಕ ಹಿಂದು ಸಮಾಜವೇ ಉಗ್ರರ ಗುಂಡೇಟಿನಿಂದ ಹುತಾತ್ಮರಾದ ಹಿಂದೂಗಳ ಕುಟುಂಬಕ್ಕೆ ಬೆಂಬಲವಾಗಿ ನಿಂತಿದೆ. ಸರ್ಕಾರ ನೀಡಿದ ಪರಿಹಾರಕ್ಕಿಂತ ಜಾಸ್ತಿ ಹಣವನ್ನು ನಾವು ಅವರ ಕುಟುಂಬಕ್ಕೆ ಕೊಡುತ್ತಿದ್ದೇವೆ ಎಂದು ಹೇಳಿದರು. ಇನ್ನು ಹುತಾತ್ಮರಾದ ಶಿವಮೊಗ್ಗದ ಮಂಜುನಾಥ ರಾವ್ ಅವರ ಮಗನಿಗೆ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಆಗಿರುವ ಆರ್ವಿ ಶಿಕ್ಷಣ ಸಂಸ್ಥೆಯಲ್ಲಿ ಸೀಟ್ ಕೊಡ್ತಾ ಇದ್ದೇವೆ. ಜೊತೆಗೆ, ಭರತ್ ಭೂಷಣ್ ಅವರ ಮಗುವಿಗೆ ಬೆಂಗಳೂರಿನ ಪ್ರತಿಷ್ಠಿತ ಟ್ರಾನ್ಸೆಂಡ್ ಶಾಲೆಯಲ್ಲಿ ಉಚಿತವಾಗಿ ಸಿಬಿಎಸ್ಇ ಪಠ್ಯಕ್ರಮದ ಶಿಕ್ಷಣ ಕೊಡಿಸಲಾಗುವುದು.
ಭರತ್ ಅವರ ಮಗನಿಗೆ 1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲು ಟ್ರಾನ್ಸೆಂಡ್ ಶಿಕ್ಷಣ ಸಂಸ್ಥೆ ಒಪ್ಪಿಕೊಂಡಿದೆ. ಇನ್ನು ಮುಂದಿನ 11 ವರ್ಷಗಳವರೆಗೆ ಭರತ್ ಹಾಗೂ ಮಂಜುನಾಥ ಅವರ ಕುಟುಂಬಕ್ಕೆ ಆಸ್ಪತ್ರೆ ಖರ್ಚುಗಳನ್ನು ಫ್ರೀಯಾಗಿ ನೋಡಿಕೊಳ್ಳಲಾಗುತ್ತದೆ ಎಂದು ಮಹಾವೀರ್ ಜೈನ್ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ ಎಂದು ಮಾಹಿತಿ ನೀಡಿದರು.