ನ್ಯೂಸ್ ನಾಟೌಟ್: ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನಡೆಸುತ್ತಿರುವ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ಮಗನ ಪರವಾಗಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ(ಮೇ.2) ವಜಾಗೊಳಿಸಿದೆ.
ಪ್ರಜ್ವಲ್ ಪರವಾಗಿ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ನಡೆಸಿತು.
ಭವಾನಿ ರೇವಣ್ಣ ಪರ ವಕೀಲರು ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ದಾಖಲೆಗಳನ್ನು ವಕೀಲರು ಪರಿಶೀಲಿಸಬೇಕು. ಆದರೆ ಸೂಕ್ತ ವಕೀಲರು ಸಿಗುತ್ತಿಲ್ಲ. ಇದರಿಂದ ಪ್ರಜ್ವಲ್ ರೇವಣ್ಣ ಪರ ಹೊಸ ವಕೀಲರ ನೇಮಕಕ್ಕೆ ಕನಿಷ್ಠ 7 ದಿನ ಕಾಲಾವಕಾಶ ಒದಗಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸಿಐಡಿ ಪರ ವಿಶೇಷ ಅಭಿಯೋಜಕರು, ಭವಾನಿ ರೇವಣ್ಣ ಸ್ವತಃ ಆರೋಪಿಯಾಗಿದ್ದಾರೆ. ವಿಶೇಷ ನ್ಯಾಯಾಲಯವು ಸಾಕ್ಷಿಯ ಹೇಳಿಕೆ ದಾಖಲಿಸಬಾರದು ಎಂದು ನಾಟಕ ಮಾಡುತ್ತಿದ್ದಾರೆ. ಈ ರೀತಿಯ ಅರ್ಜಿಗಳನ್ನು ಸಲ್ಲಿಸಿ ಕೋರ್ಟ್ ಗೆ ವಂಚಿಸುತ್ತಿದ್ದಾರೆ. ಅದಕ್ಕಾಗಿ ಭವಾನಿ ರೇವಣ್ಣ ವಿರುದ್ಧವೇ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಕೋರಿದರು. ಸರ್ಕಾರಿ ಅಭಿಯೋಜಕ ವಾದ ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.