ನ್ಯೂಸ್ ನಾಟೌಟ್: ಪಹಲ್ಗಾಮ್ ಭಯೋತ್ಪಾದನಾ ದಾಳಿಕೋರರಲ್ಲಿ ಒಬ್ಬ ಘಟನೆ ನಡೆಯುವ ಒಂದು ದಿನ ಮುಂಚೆ ತನ್ನೊಂದಿಗೆ ಮಾತನಾಡಿದ್ದರು ಎಂದು ಇತ್ತೀಚೆಗೆ ಕಾಶ್ಮೀರದಿಂದ ಹಿಂದಿರುಗಿದ ಮಹಾರಾಷ್ಟ್ರದ ಜಲ್ನಾ ನಗರದ ಯುವಕನೊಬ್ಬ ಹೇಳಿಕೊಂಡಿದ್ದಾನೆ.
“ಹಿಂದೂ ಹೋ ಕ್ಯಾ. ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ” ಎಂದು ಕಳೆದ ಏಪ್ರಿಲ್ 21 ರಂದು ಬೈಸರನ್ ಕಣಿವೆಯ ಆಹಾರ ಅಂಗಡಿಯಲ್ಲಿ ಶಂಕಿತ ಉಗ್ರ ತನ್ನನ್ನು ಪ್ರಶ್ನಿಸಿದ್ದ ಎಂದು ಆದರ್ಶ್ ರಾವತ್ ಎಂಬ ಯುವಕ ಹೇಳಿದ್ದಾರೆ.
ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಹಲ್ಗಾಮ್ ಬಳಿಯ ಹುಲ್ಲುಗಾವಲಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದರು.
ಪ್ರವಾಸಿಗರ ಹತ್ಯಾಕಾಂಡದ ಕೆಲವು ದಿನಗಳ ನಂತರ, ಭದ್ರತಾ ಸಂಸ್ಥೆಗಳು ಮೂವರು ಶಂಕಿತರ ದಾಳಿಕೋರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿತ್ತು, ಮತ್ತು ಅವರ ಫೋಟೋಗಳು ವೈರಲ್ ಆಗಿದ್ದವು. ಅವರಲ್ಲಿ ಒಬ್ಬ ತನ್ನೊಂದಿಗೆ ಮಾತನಾಡಿದ ವ್ಯಕ್ತಿಯನ್ನು ಹೋಲುತ್ತಾರೆ ಎಂದು ರಾವತ್ ಮಾಧ್ಯಮಗಳಿಗೆ ಹೇಳಿದ್ದಾನೆ.
ರಾವತ್ ಪ್ರಕಾರ, ಏಪ್ರಿಲ್ 21 ರಂದು ಪಹಲ್ಗಾಮ್ ನಲ್ಲಿ ಕುದುರೆ ಸವಾರಿ ಹೋಗಿದ್ದ ಅವರು ಊಟಕ್ಕಾಗಿ “ಮ್ಯಾಗಿ ಸ್ಟಾಲ್” ನಲ್ಲಿ ನಿಲ್ಲಿಸಿದಾಗ ಒಬ್ಬ ವ್ಯಕ್ತಿ ಅವರನ್ನು ಮಾತನಾಡಿಸಿದ್ದಾನೆ. “ನೀವು ಹಿಂದೂವೇ” ಎಂದು ಕೇಳಿದರು. ಅಲ್ಲದೆ “ನೀನು ಕಾಶ್ಮೀರಿಯಂತೆ ಕಾಣುತ್ತಿಲ್ಲವಲ್ಲ” ಎಂದು ಉಗ್ರ ಕೇಳಿದ್ದ ಎಂದು ಮಹಾರಾಷ್ಟ್ರದ ಯುವಕ ಹೇಳಿಕೊಂಡಿದ್ದಾನೆ.
“ನಂತರ ಶಂಕಿತನು ತನ್ನ ಸಹಚರನ ಕಡೆಗೆ ತಿರುಗಿ, ಇಂದು ಜನಸಂದಣಿ ಕಡಿಮೆ ಇದೆ’ ಎಂದು ಹೇಳಿದನು” ಎಂದು ರಾವತ್ ತಿಳಿಸಿದ್ದಾರೆ.
“ಎನ್ ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಬಿಡುಗಡೆ ಮಾಡಿದ ರೇಖಾಚಿತ್ರಗಳನ್ನು ನೋಡಿದ ನಂತರ, ತನ್ನೊಂದಿಗೆ ಮಾತನಾಡಿದ ವ್ಯಕ್ತಿ ನೆನಪಾದರು” ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ತಮಗಾದ ಅನುಭವವನ್ನು ವಿವರವಾಗಿ ಎನ್ ಐಎಗೆ ಇಮೇಲ್ ಮಾಡಿದ್ದೇನೆ. ನನಗೆ ನೆನಪಿರುವ ಎಲ್ಲವನ್ನೂ ನಾನು ಬರೆದಿದ್ದೇನೆ. ನೆಟ್ ವರ್ಕ್ ಸಮಸ್ಯೆಗಳಿಂದಾಗಿ ಮ್ಯಾಗಿ ಸ್ಟಾಲ್ ಮಾಲೀಕರಿಗೆ ಆರಂಭದಲ್ಲಿ ಹಣ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಸಹ ಉಲ್ಲೇಖಿಸಿದ್ದೇನೆ. ಬೆಟ್ಟದಿಂದ ಕೆಳಗೆ ಬಂದ ನಂತರ ನಾನು ಅವರ ಫೋನ್ ಸಂಖ್ಯೆಯನ್ನು ತೆಗೆದುಕೊಂಡು ಅವರಿಗೆ ಹಣ ನೀಡಿದ್ದೇನೆ” ಎಂದು ರಾವತ್ ತಿಳಿಸಿದ್ದಾರೆ.
NIA ಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದ ರಾವತ್, “ಅವರು ನನ್ನನ್ನು ಸಂಪರ್ಕಿಸಿದರೆ ನಾನು ಅವರೊಂದಿಗೆ ಸಾಧ್ಯವಿರುವ ಎಲ್ಲ ರೀತಿಯ ಮಾಹಿತಿ ಮತ್ತು ಸಹಕಾರ ನೀಡುತ್ತೇನೆ” ಎಂದಿದ್ದಾರೆ.