ನ್ಯೂಸ್ ನಾಟೌಟ್: ಹಿಂದೂ ಮುಖಂಡನ ಮೊಬೈಲ್ ನಲ್ಲಿ ಕರಾವಳಿಯ ರಾಜಕಾರಣಿಯೊಬ್ಬರ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಜಾಗರಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮೊಬೈಲ್ ನಲ್ಲಿ ವಿಡಿಯೋಗಳು ಪತ್ತೆಯಾಗಿವೆ.
ಮಂಗಳೂರು ಪೊಲೀಸರು ಪ್ರಕರಣವೊಂದರ ತನಿಖೆ ನಡೆಸುವಾಗ ವಿಡಿಯೋಗಳು ಪತ್ತೆಯಾಗಿವೆ. ಅಪಘಾತವೆಸಗಿದ ಖಾಸಗಿ ಬಸ್ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಸಮಿತ್ನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಮೊಬೈಲ್ ವಶಕ್ಕೆ ಪಡೆದಿದ್ದರು. ದತ್ತಾಂಶಗಳನ್ನು ಪಡೆಯಲು ಕೋರ್ಟ್ ಮತ್ತು ಮೇಲಾಧಿಕಾರಿ ಅನುಮತಿ ಪಡೆಯಲಾಗಿತ್ತು. ಅನುಮತಿಯ ಬಳಿಕ ಮಂಗಳೂರಿನ ಸೆನ್ ಲ್ಯಾಬ್ ನಲ್ಲಿ ಡಾಟಾ ಎಕ್ಸಟ್ರಾಕ್ಟ್ ವೇಳೆ 50ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ದೂರು ನೀಡಿದ್ದು, ಮೂಡಬಿದ್ರೆ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಅಥವಾ ಇನ್ಯಾರಿಗೋ ಕಳುಹಿಸುವ ಸಾಧ್ಯತೆ ಇದೆ ಎಂದು ಎಫ್ಐಆರ್ ದಾಖಲಾಗಿದೆ. ಬಸ್ ಗೆ ಕಲ್ಲು ತೂರಿದ ಕೇಸ್ ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿರುವ ಸಮಿತ್ ರಾಜ್ ನನ್ನು ಮತ್ತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.