ಕ್ರೈಂ

ಕೋರಮಂಗಲದಲ್ಲಿ ಭೀಕರ ರಸ್ತೆ ಅಪಘಾತ: ಹೊಸೂರಿನ ಡಿಎಂಕೆ ಶಾಸಕ ಪುತ್ರ-ಭಾವಿ ಸೊಸೆ ಸೇರಿ 7 ಮಂದಿ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರದಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಎಲ್ಲರೂ 20ರಿಂದ 30 ವರ್ಷದೊಳಗಿನ ಯುವಕ-ಯುವತಿಯರಾಗಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದೇ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಮಧ್ಯರಾತ್ರಿ ಆಡಿ ಕ್ಯೂ 3 ಕಾರು ಫುಟ್ ಪಾತ್ ಮೇಲಿದ್ದ ಬೀದಿ ದೀಪ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಆಡಿ ಕಾರು ಕಂಬಕ್ಕೆ ಅಪ್ಪಳಿಸಿ ಸ್ಥಳದಲ್ಲಿಯೇ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮೃತರನ್ನು ಕರುಣಾಸಾಗರ, ಬಿಂದು, ಇಶಿತಾ, ಡಾ ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ. ನಗರದ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರಿಗೆ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಡಿಎಂಕೆ ಶಾಸಕನ ಪುತ್ರ 

ಮೃತಪಟ್ಟವರೆಲ್ಲರು ತಮಿಳು ನಾಡು ಮೂಲದವರಾಗಿದ್ದು ಬೆಂಗಳೂರಿಗೆ ಕೆಲಸ ನಿಮಿತ್ತ ಬಂದಿದ್ದರು ಎಂದು ತಿಳಿದುಬಂದಿದೆ. ಅವರಲ್ಲೊಬ್ಬ ಮೃತ ಕರುಣಾಸಾಗರ್ ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ ಮತ್ತು ಅವರು ಮದುವೆಯಾಗಬೇಕಿದ್ದ ಯುವತಿ ಬಿಂದು ಸಹ ಒಳಗೊಂಡಿದ್ದಾರೆ. ನಿನ್ನೆ ಸಾಯಂಕಾಲ ಬೆಂಗಳೂರಿಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಖರೀದಿಸಲು ಕರುಣಾಸಾಗರ್ ತಮ್ಮ ಆಡಿ ಕಾರಿನಲ್ಲಿ ಬಂದಿದ್ದರು. ಬೆಂಗಳೂರು-ತಮಿಳು ನಾಡು ಮಧ್ಯೆ ಬ್ಯುಸ್ ನೆಸ್ ಸಂಬಂಧ ಆಗಾಗ ಬಂದು ಹೋಗುತ್ತಿದ್ದರು. ಅವರು ಬೆಂಗಳೂರಿಗೆ ಬರುವಾಗ ತಮ್ಮ ಭಾವಿ ಪತ್ನಿ ಬಿಂದು ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಹಿಂತಿರುಗಿ ಚೆನ್ನೈಗೆ ಹೋಗುವಾಗ ಮಧ್ಯರಾತ್ರಿಯಾಗಿತ್ತು. ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಅಪಘಾತದ ತೀವ್ರತೆಗೆ ಆಡಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಂತರ ಗೋಡೆಗೆ ಢಿಕ್ಕಿ ಹೊಡೆದು ನಿಂತಿದೆ. ಒಳಗಿದ್ದವರ ಕೈ ಕಾಲು ಮುರಿದು ಹೋಗಿತ್ತು. ಕಾರು ನುಜ್ಜುಗುಜ್ಜಾಗಿ ಚಕ್ರ ದೂರ ಹೋಗಿ ಬಿದ್ದಿತ್ತು. ಅಪಘಾತದ ಶಬ್ದ ತೀವ್ರವಾಗಿ ಕೇಳಿಬಂದು ಪಕ್ಕದಲ್ಲಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಎಚ್ಚರವಾಗಿ ಬಂದು ನೋಡುವಾಗ ನಿಜಕ್ಕೂ ದೃಶ್ಯ ಭೀಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಮಾಹಿತಿ ನೀಡುವುದಾಗಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

Related posts

ಸುಳ್ಯ: 6-7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ಬಲೆಗೆ, ಶರೀಫ್ ಸಿಕ್ಕಿಬಿದ್ದಿದ್ದು ಹೇಗೆ..?

ಪವಿತ್ರಾ ಮನೆಯಿಂದ ನಟ ದರ್ಶನ್ ಒಳ ಉಡುಪು, ಹೇರ್ ಸ್ಯಾಂಪಲ್ ಅನ್ನು ವಶಕ್ಕೆ ಪಡೆದ ಪೊಲೀಸರು..!, ಮಾಧ್ಯಮಗಳಿಗೆ ಮಧ್ಯದ ಬೆರಳು ತೋರಿಸಿದ ನಟನಿಗೆ ಮತ್ತೆ ಸಂಕಷ್ಟ

ಗುತ್ತಿಗಾರು: 43 ವರ್ಷದ ಮಹಿಳೆ ಹೃದಯಾಘಾತಕ್ಕೆ ಬಲಿ, ಇಬ್ಬರು ಮಕ್ಕಳು ಸಹಿತ ಕಣ್ಣೀರಾದ ಕುಟುಂಬ..!