ನ್ಯೂಸ್ ನಾಟೌಟ್: ಕಳೆದ ಮೂರ್ನಾಲ್ಕು ವರುಷಗಳ ಹಿಂದೆ ಸುಳ್ಯ ಸೇರಿದಂತೆ ಅರಂತೋಡು, ಸಂಪಾಜೆ , ಕೊಯಿನಾಡು ಭಾಗದಲ್ಲಿ ಭೂಮಿ ಕಂಪಿಸಿದ ಘಟನೆ ಬಗ್ಗೆ ವರದಿಯಾಗಿತ್ತು. ಇದೀಗ ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂಬ ಶಾಕಿಂಗ್ ಮಾಹಿತಿ ಹೊರ ಬಿದ್ದಿದೆ. ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನ ಅನುಭವವಾಗಿದೆ ಎಂಬುದರ ಬಗ್ಗೆ ವರದಿಯಾಗಿದೆ. ಬೆಳಗ್ಗೆ 10.50 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಈ ಮಾಹಿತಿ ನೀಡಿದ್ದಾರೆ.ಮನೆಯಲ್ಲಿದ್ದ ಸಾಮಗ್ರಿಗಳು ಹಾಗೂ ಗ್ರಂಥಾಲಯದಲ್ಲಿದ್ದ ವಸ್ತುಗಳು ಗಡ-ಗಡ ಅಲುಗಾಡಿದ್ದು, ಜನರು ಭಯಭೀತರಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡಿನಲ್ಲಿ ಭೂಕಂಪನದ ಅನುಭವ ಆಗಿದೆ. ಜೊತೆಗೆ, ಜೋಡುಪಾಲ ಮತ್ತು ಮೊಣ್ಣಂಗೇರಿ ಭಾಗದಲ್ಲಿಯೂ ಭೂಕಂಪನದ ಅನುಭವ ಆಗಿದೆ. ಭೂಮಿ ದೊಡ್ಡದಾಗಿ ಗುಡುಗಿ ನಡುಗಿದ ಅನುಭವ ಉಂಟಾಗಿದ್ದು ಮನೆಯಲ್ಲಿದ್ದ ಜನರು ಹೊರಗೆ ಓಡಿಬಂದಿದ್ದಾರೆ. ಈಗಾಗಲೇ ಕೆಲವು ವರ್ಷಗಳ ಹಿಂದೆ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದಿದ್ದು, ಇದೀಗ ಜನರು ಭಯಭೀತರಾಗಿದ್ದಾರೆ.
ಕಾರಣವೇನು?
ಇದು ಲಘು ಭೂಕಂಪನವಾಗಿದ್ದು, ಆದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ವಿಚಾರದ ಬಗ್ಗೆ ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಭೂಮಿಯೊಳಗೆ ಏಳು ಟೆಕ್ಟೋನಿಕ್ ಪ್ಲೇಟ್ಗಳಿವೆ ಎನ್ನಲಾಗಿದೆ. ಈ ಟೆಕ್ಟೋನಿಕ್ ಪ್ಲೇಟ್ಗಳು ನಿರಂತರವಾಗಿ ಸುತ್ತುತ್ತಿರುತ್ತವೆ. ಇವುಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಕಂಪ ಸಂಭವಿಸುತ್ತದೆ. ಟೆಕ್ಟೋನಿಕ್ ಪ್ಲೇಟ್ಗಳು ಡಿಕ್ಕಿಯಾಗಿ ಒಂದರ ಮೇಲೊಂದು ಹತ್ತಿದಾಗ ಅಥವಾ ದೂರ ಸಂಚರಿಸಿದಾಗ ನೆಲ ಅಲುಗಾಡಲು ಪ್ರಾರಂಭವಾಗುತ್ತದೆ. ಇದನ್ನು ಭೂಕಂಪ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ಅಳೆಯಲು ರಿಕ್ಟರ್ ಮಾಪಕವನ್ನು ಬಳಸಲಾಗುತ್ತಿದ್ದು, ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಮಾಪಕ ಎಂದೂ ಕರೆಯಲಾಗುತ್ತದೆ.
ರಿಕ್ಟರ್ ಮಾಪಕದ ಮಾಪನ 1 ರಿಂದ 9 ರವರೆಗೆ ಇರುತ್ತದೆ. 1 ಎಂದರೆ ಕಡಿಮೆ ತೀವ್ರತೆಯ ಕಂಪನ ಎಂದರ್ಥ. 9 ಎಂದರೆ ಗರಿಷ್ಠ. ಇದು ತುಂಬಾ ಭಯಾನಕ ಮತ್ತು ವಿನಾಶಕಾರಿಯಾಗಿದೆ. ಸಾಮಾನ್ಯವಾಗಿ ರಿಕ್ಟರ್ ಮಾಪಕದಲ್ಲಿ 6ಕ್ಕಿಂತ ಹೆಚ್ಚಿನ ತೀವ್ರತೆ ವರದಿಯಾದರೆ ಭೀಕರ ಭೂಕಂಪ ಎಂದು ಪರಿಗಣಿಸಲಾಗುತ್ತದೆ. ಸದ್ಯ, ಗ್ರಾಮ ಪಂಚಾಯತ್ ಅಧಿಕಾರಿಗಳು ಇದೆಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಬೇಕಷ್ಟೇ.