ನ್ಯೂಸ್ ನಾಟೌಟ್:ಮಾನಸ ಮಹಿಳಾ ಮಂಡಲ(ರಿ)ಜಟ್ಟಿಪಳ್ಳ ಇದರ ಬೆಳ್ಳಿಹಬ್ಬ ಆಚರಣೆ “ರಜತ ಸಂಭ್ರಮ” ಮೇ 10 ಮತ್ತು 11ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಹಾಗೂ ಬೆಳ್ಳಿಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ ಜೆ. ರೈ ತಿಳಿಸಿದ್ದಾರೆ.
ಶನಿವಾರ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಜಟ್ಟಿಪಳ್ಳದ ಯುವ ಸದನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ಮೇ 10 ರಂದು ಸಂಜೆ 7.00 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಸದಸ್ಯರು ಮತ್ತು ಬೆಳ್ಳಿಹಬ್ಬ ಆಚರಣಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ಪೆಲ್ತಡ್ಕರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ -ಅಧ್ಯಕ್ಷರಾದ ರೋ। ಯೋಗಿತಾ ಗೋವಿನಾಥ್ ಮತ್ತು ಸುಳ್ಯ ಲಯನ್ಸ್ ವಲಯದ ಅಧ್ಯಕ್ಷೆ ರೂಪಶ್ರೀ ಜೆ ರೈಯವರು ಭಾಗವಹಿಸಲಿದ್ದಾರೆ. ಈ ದಿನ ಮಹಿಳಾ ಮಂಡಲದ ಪೂರ್ವಾಧ್ಯಕ್ಷರುಗಳಿಗೂ ಹಾಗೂ ಸದಸ್ಯರುಗಳಿಗೂ ಗೌರವ ಸಲ್ಲಿಸಲಾಗುವುದು. ಹಾಗೇ ಕ್ರೀಡಾ ಮತ್ತು ಸಾಂಸ್ಕೃತಿಕ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ವಿವರ
ಸಂಜೆ ಗಂಟೆ 6.00 ಕ್ಕೆ ಬೆಳ್ಳಿ ಹಬ್ಬದ ಧ್ವಜಾರೋಹಣ ನಡೆಯಲಿದೆ. ದ.ಕ.ಜಿ.ಪ.ಶಾಲೆ ಜಟ್ಟಿಪಳ್ಳ ಇದರ ಮುಖ್ಯೋಪಾಧ್ಯಾಯಿನಿ ಸ್ವರ್ಣಕಲಾ ರವರು ನೆರವೇರಿಸುವರು. ಬಳಿಕ ಯುವಸದನ ಕಟ್ಟಡದ ಬಳಿ ಸರೋಜಿನಿ ಪೆಲ್ಕಡ್ಕ ಅವರ ಅನುದಾನ ರೂ. 3,50,000/- ದಲ್ಲಿ ನಿರ್ಮಿಸಿದ ತಡೆಗೋಡೆಯನ್ನು ನಗರ ಪಂಚಾಯತ್ ಸದಸ್ಯೆ ಸರೋಜಿನಿ ಪೆಲ್ತಡ್ಕ ರವರು ಉದ್ಘಾಟಿಸಿ, ಯುವಸದನದ ಬಳಿ ಸುಳ್ಯ ನಗರ ಪಂಚಾಯತ್ ಅನುದಾನದಿಂದ ನಿರ್ಮಿಸಲ್ಪಡುವ ಸಾರ್ವಜನಿಕ ಶೌಚಾಲಯಕ್ಕೆ ಗುದ್ದಲಿ ಪೂಜೆಯನ್ನು ಮಾಡಲಿದ್ದಾರೆ.
ಇದೇ ದಿನ ಸಂಜೆ 5.00 ಗಂಟೆಗೆ ಸ್ವಾಗತ ದ್ವಾರ ಜಟ್ಟಿಪಳ್ಳದಿಂದ ಬೆಳ್ಳಿ ಹಬ್ಬ ಮೆರವಣಿಗೆ ನಡೆಯಲಿದೆ. ಸುಳ್ಯ ಪೋಲೀಸ್ ಠಾಣೆಯ ಕ್ರೈಂ ಪೋಲೀಸ್ ಉಪನಿರೀಕ್ಷಕಿ ಸರಸ್ವತಿ ಬಿ ಟಿ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಮಹಿಳೆಯರ ಚೆಂಡೆವಾದನ, ಮಕ್ಕಳ ಕುಣಿತ ಭಜನೆ,ಮಹಿಳೆಯರ ಸಮವಸ್ತ್ರ ಪಥಸಂಚಲನ, ಸಿಡಿಮದ್ದು ಹಾಗೂ ಇನ್ನಿತರ ವೇಷಭೂಷಣಗಳು ಇರಲಿದ್ದು, ಸಂಜೆ ಗಂಟೆ 6.00 ಕ್ಕೆ ಬೆಳ್ಳಿ ಹಬ್ಬದ ಧ್ವಜಾರೋಹಣ ನಡೆಯಲಿದೆ ಎಂದವರು ತಿಳಿಸಿದರು.ಸಂಜೆ ಗಂಟೆ 6.30ರಿಂದ ಆರಂಭಿಕ ಮನರಂಜನೆಯಾಗಿ ಖ್ಯಾತ ಸುಗಮ ಸಂಗೀತಗಾರರಾದ ಆರ್ ಗೋಪಾಲಕೃಷ್ಣ ಮತ್ತು ಖ್ಯಾತ ಗಾಯಕಿ ಕು. ಶುಭದಾ ಆರ್ ಪ್ರಕಾಶ್ ರಿಂದ ಭಾವಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಳಿಕ 9ರಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಆಹ್ವಾನಿತ ಡ್ಯಾನ್ಸ್ ತಂಡ ‘ಕಲಾಮಂದಿರ ಬೆಳ್ಳಾರೆ’ಯವರಿಂದ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹಮ್ಮಿಕೊಳ್ಳಲಾಗಿದೆ. .
ಮೇ 11ರಂದು ಆದಿತ್ಯವಾರ ಜಟ್ಟಿಪಳ್ಳ ಯುವಸದನದಲ್ಲಿ ಸುಳ್ಯ ತಾಲೂಕು ವಿವಿಧ ಮಂಡಲಗಳ ಸಹಭಾಗಿತ್ವದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1.00ರವರೆಗೆ ಮಹಿಳಾ ಸಂಭ್ರಮ ‘ವಿಚಾರಗೋಷ್ಠಿ’ಯನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀಮತಿ ಹರಿಣಿ ಸದಾಶಿವ ರವರ ಅಧ್ಯಕ್ಷತೆಯಲ್ಲಿ ‘ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹಿಳೆ’ ಎನ್ನುವ ವಿಷಯದಲ್ಲಿ ಸಾಹಿತಿ ಲೀಲಾದಾಮೋದರ್ ರವರು ಮತ್ತು ಡಾ|ಅನುರಾಧ ಕುರುಂಜಿ ಯವರು ‘ಜಾಗೃತಿ ಮತ್ತು ಅಭಿವೃದ್ಧಿಯತ್ತ ಮಹಿಳೆ’ ಎನ್ನುವ ವಿಷಯದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾಗವಹಿಸುವ ಮಹಿಳೆಯರಿಗೆ ಸ್ಥಳದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಬೆಳ್ಳಿಹಬ್ಬ ಆಚರಣೆಯ ಸಮಾರೋಪ ಮತ್ತು ಸನ್ಮಾನ ಸಮಾರಂಭವೂ ಮೇ 11 ರಂದು ಸಂಜೆ ಗಂಟೆ 6.00ಕ್ಕೆ ನಡೆಯಲಿದ್ದು, ಸುಳ್ಯ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಇವರು ಅಧ್ಯಕ್ಷತೆ ವಹಿಸಿ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮತ್ತು ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳರು ರವರು ಭಾಗವಹಿಸಲಿದ್ದಾರೆ. ಬೆಳ್ಳಿಹಬ್ಬದ ಸಮಾರೋಪ ಭಾಷಣವನ್ನು ಕೆ.ವಿ.ಜಿ ಅಮರ ಜ್ಯೋತಿ ಪ.ಪೂ.ಕಾಲೇಜು ಸುಳ್ಯ ಇದರ ಪ್ರಾಂಶುಪಾಲೆ ಡಾ| ಯಶೋದಾ ರಾಮಚಂದ್ರ ಮಾಡಲಿದ್ದಾರೆ. ರಜತ ಸಂಭ್ರಮದ ನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆ ‘ಮಾನಿನಿ’ ಯನ್ನು ಸುಳ್ಯ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ರಾಧಾಕೃಷ್ಣ ಮಾಣಿಬೆಟ್ಟು ರವರು ಬಿಡುಗಡೆ ಮಾಡಲಿದ್ದಾರೆ. ಇದೆ ಸಂದರ್ಭದಲ್ಲಿ ಆರು ಜನ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ. ಆರೋಗ್ಯ ಕ್ಷೇತ್ರದಲ್ಲಿ ನಳಿನಾಕ್ಷಿ ಹೆಚ್, ಸಂಗೀತ ಕ್ಷೇತ್ರದಲ್ಲಿ ಶ್ರೀ ಕೆ.ಆರ್ ಗೋಪಾಲಕೃಷ್ಣ, ಶಿಕ್ಷಣ ಕ್ಷೇತ್ರದಲ್ಲಿ ಜಲಜಾಕ್ಷಿ ಕೆ.ಡಿ, ಸಮಾಜ ಸೇವೆ ಕ್ಷೇತ್ರದಲ್ಲಿ ರಾಮಚಂದ್ರ ಪೆಲ್ತಡ್ಕ ಮತ್ತು ಎನ್.ಎ.ಅಬ್ದುಲ್ಲ ಜಟ್ಟಿಪಳ್ಳ ಹಾಗೂ ಸಂಘಟನಾ ಕ್ಷೇತ್ರದಲ್ಲಿ ರಘುನಾಥ ಜಟ್ಟಿಪಳ್ಳ ಇವರುಗಳಿಗೆ ಸನ್ಮಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಕಾರ್ಯದರ್ಶಿ ಅನನ್ಯ ಅನಿಲ್, ಕೋಶಾಧಿಕಾರಿ ಸವಿತಾ ಲಕ್ಷ್ಮಣ ಆಚಾರ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಜಯಂತಿ ಆರ್ ರೈ ಹಾಗೂ ಗೌರವ ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.