ಕ್ರೈಂ

ಸರಸ್ವತಿ ಕಾಮತ್ ಗೆ ಹಲ್ಲೆ ಕೇಸ್: ಹರೀಶ್ ಕಂಜಿಪಿಲಿ ಜೈಲು ಶಿಕ್ಷೆ ಅಮಾನತುಗೊಳಿಸಿದ ನ್ಯಾಯಾಲಯ

ಪುತ್ತೂರು: 2013ರ ವಿಧಾನಸಭಾ ಚುನಾವಣೆ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯ ಆಗಿನ ಯುವನಾಯಕ, ಹಾಲಿ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಮತ್ತು ಕಾರ್ಯಕರ್ತರು ಮರ್ಕಂಜದಲ್ಲಿ ಹಲ್ಲೆ ನಡೆಸಿದ್ದಾರೆ ಅನ್ನುವ ಪ್ರಕರಣದ ಶಿಕ್ಷೆಯ ತೀರ್ಪನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಅಮಾನತುಗೊಳಿಸಿದೆ.

ಏನಿದು ಘಟನೆ?

2013 ಮೇ.4 ರಂದು ಮರ್ಕಂಜ ಗ್ರಾಮದ ಕುದ್ಕುಳಿ ಎಂಬಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡ ಆಗಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಸರಸ್ವತಿ ಕಾಮತ್ ಹಾಗೂ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿತ್ತು. ಈ ಪ್ರಕರಣ ಸುಳ್ಯದ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ತಿಂಗಳ ಹಿಂದೆ ಸೆಪ್ಟೆಂಬರ್ 9 ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಪ್ರಕರಣದ ಆರೋಪಿಗಳಾದ ಹರೀಶ್ ಕಂಜಿಪಿಲಿ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೊಡಪಾಲ, ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ ಚೆಮ್ನೂರು, ರಾಮಚಂದ್ರ ಹಲ್ದಡ್ಕ, ಷಣ್ಮುಖ ಸೂಟೆಗದ್ದೆ, ಧನಂಜಯ ಬೈಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನೋಹರ, ದೀಪಕ್ ಎಲಿಮಲೆ, ಮನೋಜ್ ಎಂ.ಕೆ. ಮತ್ತು ವಿಶ್ವನಾಥ ಸಿ.ಎಲ್. ಯಾನೆ ವಿಕಾಸ್ ರವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ಕೆಲವು ಸಾವಿರ ರೂ. ದಂಡ ವಿಧಿಸಿತ್ತು. ಈ ತೀರ್ಪು ಘೋಷಿಸಿದ ಸುಳ್ಯ ನ್ಯಾಯಾಲಯವು ಆರೋಪಿಗಳಿಗೆ ಮೇಲ್ಮನವಿಗೆ 1ತಿಂಗಳ ಕಾಲಾವಕಾಶ ನೀಡಿತ್ತು. ಇದೀಗ ಆರೋಪಿಗಳು ಅಡಿಶನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪುತ್ತೂರು ಇಲ್ಲಿಗೆ ಮೇಲ್ಮನವಿ ಸಲ್ಲಿಸಿದ್ದು ನ್ಯಾಯಾಲಯವು ಇವರ ವಿರುದ್ಧ ಸುಳ್ಯ ನ್ಯಾಯಾಲಯವು ನೀಡಿರುವ ತೀರ್ಪನ್ನು ಅಮಾನತು ಮಾಡಿದೆಯಲ್ಲದೆ ಕೇಸಿಗೆ ಸಂಬಂಧಿಸಿದ ಕಡತಗಳನ್ನು ಪುತ್ತೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಸೂಚಿಸಿದೆ. 

ದಂಡ ಡಿಪಾಸಿಟ್ ಮಾಡಲು ನಿರ್ದೇಶನ 

” ಶಿಕ್ಷೆ ಘೋಷಿಸಲ್ಪಟ್ಟ ಅಪರಾಧಿಗಳು ಹದಿನೈದು ದಿನಗಳೊಳಗೆ ಟ್ರಯಲ್ ಕೋರ್ಟ್ ನಲ್ಲಿ ಅವರಿಗೆ ವಿಧಿಸಿದ ದಂಡವನ್ನು ಡಿಪಾಸಿಟ್ ರೂಪದಲ್ಲಿ ಕಟ್ಟಬೇಕು ಮತ್ತು ಪ್ರತಿಯೊಬ್ಬ ಆರೋಪಿ ಕೂಡ ತಲಾ ಐವತ್ತು ಸಾವಿರ ರೂ. ವೈಯಕ್ತಿಕ ಬಾಂಡ್ ಕೋರ್ಟಿಗೆ ಸಲ್ಲಿಸಬೇಕು ಮತ್ತು ತಲಾ ಒಬ್ಬರ ಶ್ಯೂರಿಟಿ ಒದಗಿಸಬೇಕು” ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಸುಳ್ಯದ ನ್ಯಾಯಾಲಯದಿಂದ ತರಿಸಲ್ಪಟ್ಟ ದಾಖಲೆಗಳ ಆಧಾರದಲ್ಲಿ ನವೆಂಬರ್ 8 ರಿಂದ ವಿಚಾರಣೆ ನಡೆಸುವುದಾಗಿ ಪುತ್ತೂರು ಜಿಲ್ಲಾ ನ್ಯಾಯಾಲಯ ತಿಳಿಸಿದೆ. ಹರೀಶ್ ಕಂಜಿಪಿಲಿ ಮತ್ತವರ ತಂಡದ ಪರವಾಗಿ ಪುತ್ತೂರಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

Related posts

ಕುರಿಗಳನ್ನು ತೊಳೆಯಲು ಹೋಗಿದ್ದವರು ನೀರು ಪಾಲು! ಒಂದೇ ಕುಟುಂಬದ ಮೂವರ ದುರಂತ ಅಂತ್ಯ!

ಸ್ವಂತ ತಂದೆಯನ್ನೇ ಮದುವೆಯಾದ ಯುವತಿ! ತಂದೆಗೆ ಈಕೆ 4ನೇ ಹೆಂಡತಿ..! ಈ ವಿಚಿತ್ರ ಮದುವೆಯ ಬಗ್ಗೆ ಆಕೆ ಹೇಳಿದ್ದೇನು?

ಸುರತ್ಕಲ್‌: ಬೆಂಕಿಗಾಹುತಿಯಾದ ಅಂಗಡಿ, ಅಪಾರ ನಷ್ಟ