ಸುಳ್ಯ: ಉಪನ್ಯಾಸಕಿಯೊಬ್ಬರು ತನ್ನ ಫೇಸ್ ಬುಕ್ ವಾಲ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಅವರು ಮಾಡಿಕೊಂಡು ಬರುತ್ತಿರುವ ಪೂಜೆ ಕೈಂಕರ್ಯಗಳನ್ನು ಲಘುವಾಗಿಸಿ ಬರೆದಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಬ್ರಾಹ್ಮಣ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಳ್ಯದ ಪದವಿ ಕಾಲೇಜೊಂದರ ಅತಿಥಿ ಉಪನ್ಯಾಸಕಿಯೋರ್ವರು ಮಾಡಿದ ಅವಹೇಳನಕಾರಿ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದೆ ಫೋಟೋದಲ್ಲಿ?
ದೇವರ ಪೂಜೆ ಮಾಡುವ ಬ್ರಾಹ್ಮಣರ ಫೋಟೋವನ್ನು ಪ್ರಕಟಿಸಲಾಗಿದೆ. ಕೆಳಗೆ ‘ಈ ಸೋಂಬೇರಿಗಳು ದುಡಿದು ತಿನ್ನಲು ಆಗದೆ ಕಂಡು ಹಿಡಿದ ಎರಡು ವೃತಗಳೇ ವರಮಹಾಲಕ್ಷ್ಮೀ ವೃತ ಮತ್ತು ಸತ್ಯನಾರಾಯಣ ಪೂಜೆ ಎಂಬ ಪೋಸ್ಟರ್ ಗೆ `ಇವರು, ‘ಹೊಟ್ಟೆ ತುಂಬಿಸಲು ಹೋಗಿ ನೀವು ಸಾಲಗಾರರಾಗಬೇಡಿ’ ಎಂದು ಬರೆದಿದ್ದಾರೆ. ಈ ಮೂಲಕ ಬ್ರಾಹ್ಮಣರನ್ನು ಮತ್ತು ಹಿಂದೂ ಸಮುದಾಯದವರು ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವ ವೃತಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರ ಬಗ್ಗೆ ಬ್ರಾಹ್ಮಣ ಸಮುದಾಯ ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಅವಹೇಳನಕಾರಿಯಾಗಿ ಬರೆದ ಉಪನ್ಯಾಸಕಿ ವಿರುದ್ದ ಪೊಲೀಸ್ ದೂರು ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಉಪನ್ಯಾಸಕಿ ತನ್ನ ಪೋಸ್ಟ್ ಡಿಲಿಟ್ ಮಾಡಿದ್ದಾರೆ .