ನ್ಯೂಸ್ ನಾಟೌಟ್: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೇಶದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದಷ್ಟೇ ಯುದ್ಧ ಬೇಡ ಎಂದು ಹೇಳಿದ್ದಾರೆ , ಆ ಹೇಳಿಕೆಯನ್ನು ನಾವು ದೌರ್ಬಲ್ಯವೆಂದು ಅರ್ಥೈಸಿಕೊಳ್ಳಬಾರದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರ ಜತೆ ಮಾತಾನಾಡಿದ ಅವರು, ಭಾರತ ಎಂದೂ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ. ಹಿಂದಿನಿಂದಲೂ ಶಾಂತಿಯನ್ನೇ ಕಾಪಾಡಿಕೊಂಡಿದೆ. ಆದರೆ ನಮ್ಮನ್ನು ಕೆಣಕಿದಾಗ ನಾವು ಸೂಕ್ತ ಪ್ರತ್ಯುತ್ತರ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಶಾಂತಿಯ ದೃಷ್ಟಿಯಿಂದಷ್ಟೇ ಹೇಳಿಕೆ ನೀಡಿದ್ದಾರೆ ಎಂದರು.ಕೇಂದ್ರ ಸರ್ಕಾರ ಪಾಕಿಸ್ತಾನಿಯರನ್ನು ದೇಶದಿಂದ ಹೊರ ಹಾಕುವಂತೆ ಆದೇಶಿಸಿದೆ. ಅದರಂತೆ ನಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇವೆ. ಎಷ್ಟು ಮಂದಿ ಪಾಕಿಸ್ತಾನಿಯರು ಇದ್ದಾರೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಅವರನ್ನು ತಕ್ಷಣವೇ ವಾಪಸ್ ಕಳುಹಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವೇ ದೀರ್ಘಾವಧಿ ವೀಸಾ ಪಡೆದಿರುವವರು, ಮದುವೆ ಆಗಿರುವವರಿಗೆ ಕೆಲವೊಂದಿಷ್ಟು ರಿಯಾಯಿತಿಗಳನ್ನು ನೀಡಿದೆ. ಅಂತಹವರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಾಕಿಸ್ತಾನಿಯರನ್ನೂ ಹೊರಹಾಕಲಾಗುವುದು ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಆರೋಪಿಯನ್ನು ಇನ್ನೂ ಬಂಧಿಸಿಲ್ಲ, ಕನಿಷ್ಠ ವಿಚಾರಣೆಯನ್ನೂ ನಡೆಸಿಲ್ಲವೇಕೆ ಎಂಬ ಪ್ರಶ್ನೆಗೆ, ಈಗಲೇ ಉತ್ತರಿಸಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದ್ದು, ಬಳಿಕವಷ್ಟೇ ಉತ್ತರ ಸಿಗಲಿದೆ. ನೀವು ಹೇಳಿದಂತೆ ಮಾಡಲಾಗದು. ಅದಕ್ಕೊಂದು ಎಸ್ಒಪಿ ಎಂದು ಇದೆ. ಅದರ ಪ್ರಕಾರವೇ ಪೊಲೀಸರು ತನಿಖೆ, ವಿಚಾರಣೆ ನಡೆಸುತ್ತಾರೆ ಎಂದು ಹೇಳಿದರು.