ಮಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್ ಮೆಂಟ್ ನ ನಾಲ್ವರು ಮಕ್ಕಳು ಪತ್ತೆಯಾಗಿದ್ದು, ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಜಿಬಿ ಲೇಔಟ್ ನ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಅಮೃತವರ್ಷಿಣಿ ಮನೆಯಿಂದ ಹೋಗಬೇಕಾದ್ರೆ 70 ಗ್ರಾಂ ಚಿನ್ನದ ನೆಕ್ಲೆಸ್, ರೂ. 3000 ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಕ್ಕಳ ದಾಖಲೆಯನ್ನ ಎಲ್ಲಾ ಠಾಣೆಗಳಿಗೆ ರವಾನಿಸಿ ಮಕ್ಕಳನ್ನು ಹುಡುಕಲಾಗುತ್ತಿತ್ತು. ಸದ್ಯ ಈಗ ಮಕ್ಕಳು ಸಿಕ್ಕಿದ್ದಾರೆ.