ನ್ಯೂಸ್ ನಾಟೌಟ್ : ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಅಂತ ಪೋಷಕರು ನಾನಾ ಸರ್ಕಸ್ ಮಾಡುತ್ತಾರೆ.ತಮ್ಮ ಮಕ್ಕಳು ಸುಸಂಸ್ಕೃತರಾಗಲಿ ಅಂತ ಪೋಷಕರು, ಸಂಸ್ಕೃತ ಹಾಗೂ ವೇದಾಧ್ಯಯನ ಮಾಡಿಸುತ್ತಾರೆ. ಆದರೆ ಮಕ್ಕಳಿಗೆ ತಂದೆ ತಾಯಿ ನೆನಪಾಗೋದು ಸಹಜ.ಹೀಗೆ ವಿದ್ಯಾರ್ಥಿಯೊಬ್ಬ ದೂರದ ಊರಿನಲ್ಲಿರುವ ಅವರ ಪೋಷಕರಿಗೆ ಬೇರೊಬ್ಬರ ಮೊಬೈಲ್ನಿಂದ ಕರೆ ಮಾಡಿದಕ್ಕೆ ಆಕ್ರೋಶಗೊಂಡ ಮುಖ್ಯ ಶಿಕ್ಷಕ (Head Master) ಮನಸೋಇಚ್ಛೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಪ್ರಕರಣ ನಡೆದಿದೆ. ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಈ ಗ್ರಾಮದಲ್ಲಿರುವ ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ವೇದಾಧ್ಯಯನ ಶಾಲೆಯಲ್ಲಿ ವಿವಿದೆಡೆಯ ಹಲವು ವಿದ್ಯಾರ್ಥಿಗಳು ವೇದಾಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಮೇಲೆ ವೀರೇಶ್ ಹಿರೇಮಠ್ ಎಂಬ ಮುಖ್ಯ ಶಿಕ್ಷಕ ಮನಸೋಇಚ್ಛೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾನೆ.
ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆ ಶಿಕ್ಷಕನ ಕ್ರೌರ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಆಕ್ರೋಶದಿಂದ ಪುಟ್ಟ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಶಿಕ್ಷಕ ವಿರೇಶ್ ನಾಪತ್ತೆಯಾಗಿದ್ದಾನೆ. ಈ ರೀತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆದ ಹಿನ್ನೆಲೆ ಸಾರ್ವಜನಿಕ ವಲಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ













