ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು IQAC ಸಂಯುಕ್ತಾಶ್ರಯದಲ್ಲಿ, ಇಂಡಿಯನ್ ಕೌನ್ಸಿಲ್ ಫಾರ್ ಸೋಷಿಯಲ್ ಸೈನ್ಸಸ್ ರಿಸರ್ಚ್ (ICSSR–SRC), ಹೈದರಾಬಾದ್ ಇವರ ಸಹಭಾಗಿತ್ವದಲ್ಲಿ “Digital Payments and Financial Services in Indigenous Communities: Opportunities and Challenges” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿ ಗೆ ಅ.15ರಂದು ಕಾಲೇಜಿನ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.
ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ. ಕವಿತಾ ಕೆ.ಆರ್ ಮಾತನಾಡಿ, ‘ಇಂದಿನ ಡಿಜಿಟಲ್ ಯುಗದಲ್ಲಿ ಹಣಕಾಸು ವ್ಯವಹಾರಗಳು ಸಂಪೂರ್ಣವಾಗಿ ತಂತ್ರಜ್ಞಾನಾಧಾರಿತವಾಗಿದ್ದು, ಗ್ರಾಮೀಣ ಹಾಗೂ ಎಲ್ಲಾ ಸಮುದಾಯಗಳಿಗೂ ಡಿಜಿಟಲ್ ಪಾವತಿ ವಿಧಾನಗಳ ಅರಿವು ಬಹಳ ಅಗತ್ಯ ಎಂದರು. ಪ್ರಸ್ತುತ ಕಾಲದಲ್ಲಿ ಇಂತಹ ವಿಚಾರಗೋಷ್ಠಿಯನ್ನು ಆಯೋಜಿಸಿರುವುದು ಅವಶ್ಯಕ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು AOLE (ರಿ.), ಸುಳ್ಯ ಉಪಾಧ್ಯಕ್ಷೆ ಶೋಭಾ ಚಿದಾನಂದ ವಹಿಸಿದ್ದರು. ಸೆಂಟ್ರಲ್ ಯೂನಿವರ್ಸಿಟಿ ಆಫ್ ಕೇರಳ, ಪೆರಿಯ ಕಾಸರಗೋಡು ಇಲ್ಲಿನ ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಮಕೃಷ್ಣ ಬಂಡಾರು ಡಿಜಿಟಲ್ ಪಾವತಿಯ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಆಯೋಜಕರು ಡಾ. ರುದ್ರಕುಮಾರ್ ಎಂ. ಎಂ., ವಾಣಿಜ್ಯ ವಿಭಾಗ ಮುಖ್ಯಸ್ಥರು ರತ್ನಾವತಿ ಡಿ., IQAC ಸಂಯೋಜಕಿ ಡಾ. ಮಮತಾ ಕೆ., ಪಿಟಿಎ ಅಧ್ಯಕ್ಷೆ ಶಶ್ಮಿ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿಶಾ ಮತ್ತು ಬಳಗ ಪ್ರಾರ್ಥಿಸಿದರು. ಡಾ. ರುದ್ರಕುಮಾರ್ ಎಂ.ಎಂ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರತ್ನಾವತಿ ಡಿ ವಂದಿಸಿದರು.













